ಮಂಗಳೂರು, ಡಿ.11: ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಹಾಗೂ ಮಾನವ ಹಕ್ಕುಗಳ ಸರಕಾರೇತರ ಸಂಸ್ಥೆಗಳ ಸಹಯೋಗದಲ್ಲಿ ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಸಿ.ಜಿ.ಹುನಗಂದ ಉದ್ಘಾಟಿಸಿ ನಿಸರ್ಗದತ್ತವಾಗಿ ಬಂದ ಮಾನವ ಹಕ್ಕುಗಳನ್ನು ಕಾಪಾಡುವ ಜವಾಬ್ದಾರಿ ಸರಕಾರದ ಮೇಲಿದ್ದು, ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಈ ಹೊಣೆಗಾರಿಕೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಹೇಳಿದರು.
12ನೆ ಶತಮಾನದಲ್ಲಿ ವಚನಕ್ರಾಂತಿಯ ಮೂಲಕ ಬಸವಣ್ಣ ಮಾನವಹಕ್ಕಿನ ನೆಲೆಗಟ್ಟು ರೂಪಿಸಿದರು. ಮೊದಲನೆ ಮಹಾಯುದ್ಧದಲ್ಲಿ ಮಾನವೀಯತೆಯ ಕಗ್ಗೊಲೆಯ ನಂತರ ಮಾನವ ಹಕ್ಕುಗಳ ಸಂರಕ್ಷಣೆಗೆ ಜಾಗತಿಕ ಆಯಾಮ ಸಿಕ್ಕಿತು. ಬದುಕು, ಸ್ವಾತಂತ್ರ ಘನತೆ, ಸಮಾನತೆ ಮೂಲತತ್ವವನ್ನಿಟ್ಟುಕೊಂಡು ಮಾನವ ಹಕ್ಕು ಗಳನ್ನು ರೂಪಿಸಲಾಗಿದೆ. ಮಾನವಹಕ್ಕುಗಳ ಸಂರಕ್ಷಣೆಯ ಘೋಷಣೆಯ ಜೊತೆಗೆ ಅವುಗಳ ಅನುಷ್ಠಾನವನ್ನು ಸಮಪರ್ಕವಾಗಿ ಮಾಡಬೇಕು ಎಂದವರು ಹೇಳಿದರು.
ಕಾರ್ಯಕ್ರಮದಲ್ಲಿ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡಿ, ಸುಂದರ ಮಲೆಕುಡಿಯ, ದಾದ್ರಿ ಘಟನೆಗಳು ನಮ್ಮ ದೇಶದಲ್ಲಿ ಮಾನವ ಹಕ್ಕು ಉಲ್ಲಂಘನೆ ನಡೆಯುತ್ತಿರುವುದಕ್ಕೆ ನಿದರ್ಶನ. ಸರಕಾರಿ ಕಚೇರಿಗಳು ಸೇರಿದಂತೆ ಹೆಚ್ಚಿನೆಡೆ ಮಾನವ ಹಕ್ಕುಗಳ ಸಂರಕ್ಷಣೆಯಾಗಬೇಕು ಎಂದು ಹೇಳಿದರು. ಈ ಸಂದರ್ಭ ದ.ಕ ಜಿಲ್ಲಾ ಎಸ್ಪಿ ಡಾ.ಶರಣಪ್ಪ ಮಾನವ ಹಕ್ಕುಗಳಿಗೆ ಸಂಬಂಧಪಟ್ಟ ಪ್ರಮಾಣವಚನವನ್ನು ಬೋಧಿಸಿದರು.
ಕಾರ್ಯಕ್ರಮದಲ್ಲಿ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಗಣೇಶ್ ಬಿ., ಅಪರ ಜಿಲ್ಲಾಧಿಕಾರಿ ಕುಮಾರ್, ದ.ಕ. ಜಿಪಂ ಸಿಇಒ ಪಿ.ಐ.ಶ್ರೀವಿದ್ಯಾ, ಮಾನವ ಹಕ್ಕುಗಳ ಸರಕಾರೇತರ ಸಂಸ್ಥೆಯ ಪ್ರತಿನಿಧಿ ಬಾಲಕೃಷ್ಣ ರೈ ಉಪಸ್ಥಿತರಿದ್ದರು.