ಮಂಗಳೂರು,ಡಿ.13: ಶ್ರೀ ನಾರಾಯಣ ಗುರು ಕಾಲೇಜು ಕುದ್ರೋಳಿ ಇದರ ಬೆಳ್ಳಿ ಹಬ್ಬದ ಪ್ರಯುಕ್ತ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘವು ಅಮೇಚೂರ ಕಬಡ್ಡಿ ಅಸೋಶಿಯೇಶನ್ (ರಿ.) ದ.ಕ ಹಾಗೂ ಮಂಗಳೂರು ತಾಲೂಕು ಅಮೇಚೂರು ಕಬಡ್ಡಿ ಅಸೋಸಿಯೇಶನ್ (ರಿ.) ಇವರ ಸಹಯೋಗದೊಂದಿಗೆ ಅಯೋಜಿಸಿದ ಮಂಗಳೂರು ವಿಶ್ವ ವಿದ್ಯಾನಿಲಯ ಮಟ್ಟದ ಅಂತರ ಕಾಲೇಜು ಹಾಗೂ ದಕ್ಷಿಣ ಕನ್ನಡ, ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ಆಹ್ವಾನಿತ ಪುರುಷ ತಂಡಗಳ ಕಬಡ್ಡಿ ಪಂದ್ಯಾಟ ‘ಖೇಲ್ ಕಬಡ್ಡಿ -2015, ಶನಿವಾರ ನಗರದ ‘ಉರ್ವ ಮೈದಾನ’ದಲ್ಲಿ ನಡೆಯಿತು.
ಖೇಲ್ ಕಬಡ್ಡಿಯ ಪ್ರಥಮ ಸ್ಥಾನವನ್ನು ಮೂಡಬಿದ್ರೆಯ ಆಳ್ವಾಸ್ ಕಾಲೇಜು ಪಡೆಯಿತು. ಮಂಗಳೂರು ವಿವಿ ಮಟ್ಟದ ಅಂತರ್ ಕಾಲೇಜು ಫೈನಲ್ ಸ್ಫರ್ಧೆಯಲ್ಲಿ ಆಳ್ವಾಸ್ ತಂಡವು 38 – 16 ಅಂತರದಿಂದ ಬೆಸೆಂಟ್ ಸಂದ್ಯಾ ಕಾಲೇಜು ತಂಡವನ್ನು ಮಣಿಸಿತು. ರೂ.7,777 ನಗದು ಬಹುಮಾನ ಹಾಗೂ ಪಾರಿತೋಷವನ್ನು ಪಡೆಯಿತು. ಬೆಸೆಂಟ್ ಸಂದ್ಯಾ ಕಾಲೇಜು ತಂಡ 5,555 ರೂ. ನಗದು ಬಹುಮಾನ ಹಾಗೂ ಪಾರಿತೋಷವನ್ನು ಪಡೆದುಕೊಂಡಿತ್ತು. ತೃತೀಯ ಸ್ಥಾನಕ್ಕೆ ತೃಪ್ತಿ ಪಡೆದುಕೊಂಡ ಉಜಿರೆ ಎಸ್.ಡಿ.ಎಂ ಕಾಲೇಜು ರೂ.3,333 ನಗದು ಬಹುಮಾನ ಹಾಗೂ ಪಾರಿತೋಷವನ್ನು ಪಡೆಯಿತು . ಮಣ್ಣಗುಡ್ಡೆಯ ಶ್ರೀ ಗೋಕರ್ಣನಾಥ ಕಾಲೇಜು ತಂಡ ನಾಲ್ಕನೇ ಸ್ಥಾನ ಪಡೆಯಿತು.
ಬಳಿಕ ನಡೆದ ಜಿಲ್ಲಾ ಮಟ್ಟದ ಆಹ್ವಾನಿತ ಕಬಡ್ಡಿ ಪಂದ್ಯಾಟದಲ್ಲಿ ವಿಜೇತ ತಂಡಕ್ಕೆ 1ನೇ ಬಹುಮಾನ 33,333/- ನಗದು ಹಾಗೂ ಪಾರಿತೋಷಕ, 2ನೇ ಬಹುಮಾನ 22,222/- ನಗದು ಹಾಗೂ ಪಾರಿತೋಷಕ, 3ನೇ ಬಹುಮಾನ 11,111/-ನಗದು ಹಾಗೂ ಪಾರಿತೋಷಕ, 4ನೇ ಬಹುಮಾನ 9,999/-ನಗದು ಹಾಗೂ ಪಾರಿತೋಷಕವನ್ನು ನೀಡಿ ಗೌರವಿಸಲಾಯಿತು.
ಸಂಜೆ ನಡೆದ ಸಭಾ ಕಾರ್ಯಕ್ರಮದಲ್ಲಿ ಸಮಾಜದ ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಭಾಗವಹಿಸಿ ಬಹುಮಾನ ವಿತರಿಸಿದರು.
ಕಾಲೇಜಿನ ಹಳೆ ವಿಧ್ಯಾರ್ಥಿ ಸಂಘ ಅಧ್ಯಕ್ಷ ಶ್ರೀದೀಪಕ್ ಸುವರ್ಣ, ಕುದ್ರೋಳಿ ಶ್ರೀ ನಾರಾಯಣ ಗುರು ಕಾಲೇಜಿನ ಪಾಂಶುಪಾಲ ಡಾ.ವಸಂತ್ ಕುಮಾರ್, ದಕ್ಷಿಣ ಕನ್ನಡ ಅಮೆಚೂರು ಕಬಡ್ಡಿ ಅಸೋಶಿಯೇಶನ್ ಕಾರ್ಯದರ್ಶಿ ಪುರುಷೋತ್ತಮ್ .ಬಿ, ಶ್ರೀ ನಾರಾಯಣ ಗುರು ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಸಾದ್ ಕುಮಾರ್, ಸಂಘದ ಸಾರ್ವಜನಿಕ ಸಂಪರ್ಕಧಿಕಾರಿ ಕೆ ರತ್ನಾಕರ್ ಕುಡ್ವ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.