ಮಂಗಳೂರು, ಡಿ.15: ಕಲೆ, ಸಂಸ್ಕೃತಿ ಮತ್ತು ಶಿಕ್ಷಣವನ್ನು ಪೋಷಿಸುವ ನಿಟ್ಟಿನಲ್ಲಿ ಆರಂಭಗೊಂಡಿರುವ ಸಂದೇಶ ಪ್ರತಿಷ್ಠಾನದಿಂದ ನೀಡಲಾಗುವ 25ನೆ ವರ್ಷದ ಸಂದೇಶ ಪ್ರಶಸ್ತಿ 2016ಕ್ಕೆ 8 ಸಾಧಕರನ್ನು ಆಯ್ಕೆ ಮಾಡಲಾಗಿದೆ ಎಂದು ಸಂದೇಶ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷ ನಾ.ಡಿಸೋಜ ಅವರು ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಸಂದೇಶ ಕನ್ನಡ ಸಾಹಿತ್ಯ ಪ್ರಶಸ್ತಿಗೆ ಡಾ.ಎಚ್.ಎಸ್.ವೆಂಕಟೇಶ ಮೂರ್ತಿ, ಕೊಂಕಣಿ ಸಾಹಿತ್ಯ ಪ್ರಶಸ್ತಿಗೆ ಗ್ಲಾಡಿಸ್ ರೇಗೊ, ತುಳು ಸಾಹಿತ್ಯ ಪ್ರಶಸ್ತಿಗೆ ದೇವದಾಸ್ ಕಾಪಿಕಾಡ್, ಉತ್ತಮ ಅಧ್ಯಾಪಕ ಪ್ರಶಸ್ತಿಗೆ ಸುಗಂಥಾ ಸತಿಯರಾಜ್, ಕಲಾ ಪ್ರಶಸ್ತಿಗೆ ಉಸ್ತಾದ್ ರಫೀಕ್ ಖಾನ್, ಕೊಂಕಣಿ ಸಂಗೀತ ಪ್ರಶಸ್ತಿಗೆ ಅಲೆಕ್ಸಾಂಡರ್ ಜೋಯೆಲ್ ಪಿರೇರ, ಮಾಧ್ಯಮ ಪ್ರಶಸ್ತಿಗೆ ಥಾಮಸ್ ಡಿಸೋಜ ಹಾಗೂ ಸಂದೇಶ ವಿಶೇಷ ಪ್ರಶಸ್ತಿಗೆ ಜಿ.ಎಸ್. ಜಯದೇವ ಅವರನ್ನು ಆಯ್ಕೆ ಮಾಡಲಾಗಿದೆ. ಜ.16ರಂದು ಸಂದೇಶದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಶಸ್ತಿ ಆಯ್ಕೆ ಸಮಿತಿಯ ಸದಸ್ಯ ಡಾ.ನಾ. ದಾಮೋದರ ಶೆಟ್ಟಿ, ಮಾಧ್ಯಮ ಸಮಿತಿಯ ಮುಖ್ಯಸ್ಥ ಟೈಟಸ್ ನೊರೊನ್ಹ, ಸಂದೇಶ ಪ್ರತಿಷ್ಠಾನದ ನಿರ್ದೇಶಕ ರೆ.ಫಾ.ವಿಕ್ಟರ್ ವಿಜಯ್ ಲೋಬೊ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಾಯ್ ಕ್ಯಾಸ್ತಲಿನೊ ಉಪಸ್ಥಿತರಿದ್ದರು.