ಪುತ್ತೂರು,ಡಿ.15: ಮುಂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೆ ಗ್ರಾಮದ ಭಕ್ತಕೋಡಿಯಲ್ಲಿ ಮಾನವನ ತಲೆ ಬುರುಡೆ ಹಾಗೂ ಕೈಕಾಲುಗಳು ಗೋಣಿ ಚೀಲದಲ್ಲಿ ಪ್ರತ್ಯೇಕ ಸ್ಥಳದಲ್ಲಿ ಪತ್ತೆಯಾಗಿರುವ ಘಟನೆ ಸೋಮವಾರ ನಡೆದಿದೆ.
ಭಕ್ತಕೋಡಿಯಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಸಮೀಪವಿರುವ ಪದ್ಮಜ ಫಾರ್ಮ್ಸ್ನವರ ಜಾಗದಲ್ಲಿ ಕೈ ಚೀಲದೊಳಗೆ ತಲೆ ಬುರುಡೆ ಪತ್ತೆಯಾಗಿದೆ.ತಲೆ ಬುರುಡೆ ಪತ್ತೆಯಾದ ಸ್ಥಳದಿಂದ ಸುಮಾರು ಅರ್ಧ ಕೀ.ಮೀ ದೂರದಲ್ಲಿರುವ ಕಲ್ಲಗುಡ್ಡೆ ಕ್ರಾಸ್ ಬಳಿ ಗುಡ್ಡೆಯಲ್ಲಿ ಪೊದೆಯಲ್ಲಿ ಗೋಣಿ ಚೀಲದೊಳಗೆ ಕೈಕಾಲುಗಳ ಮೂಳೆ ಪತ್ತೆಯಾಗಿದೆ.ಪಕ್ಕದಲ್ಲಿ ಕರಿಮಣಿ ಸರ ಹಾಗೂ ನೀಲಿ ಬಣ್ಣದ ಸೀರೆ ಪತ್ತೆಯಾಗಿದ್ದು ತಲೆ ಬುರುಡೆ ಹಾಗೂ ಕೈ ಕಾಲಿನ ಮೂಳೆಗಳು ಮಹಿಳೆಯದ್ದಾಗಿರಬೇಕೆಂಬ ಶಂಕೆ ಉಂಟಾಗಿದೆ.
ಸಂಜೆ ವೇಳೆ ಪದ್ಮಜ ಫಾರ್ಮ್ಸ್ನ ಕೆಲಸದಾಳುಗಳು ಹಟ್ಟಿಗೆ ಬಂದಾಗ ದುರ್ವಾಸನೆ ಬರುತ್ತಿತ್ತು. ಯಾರೋ ಕೋಳಿ ಮಾಂಸ ಎಸೆದು ಹೋಗಿರಬಹುದು ಎಂದು ಅವರು ಆರಂಭದಲ್ಲಿ ಸಂಶಯಿಸಿದ್ದರಾದರೂ ಬಳಿಕ ಪರಿಶೀಲಿಸಿದಾಗ ಹಟ್ಟಿಯಿಂದ ಸುಮಾರು 20 ಮೀಟರ್ ದೂರದಲ್ಲಿ ಕೈ ಚೀಲದೊಳಗೆ ಮನುಷ್ಯನ ತಲೆ ಬುರುಡೆ ಪತ್ತೆಯಾಯಿತು.ಈ ವೇಳೆ ಸ್ಥಳದಲ್ಲಿ ನೂರಾರು ಮಂದಿ ಜಮಾಯಿಸಿದ್ದರು.ಈ ವೇಳೆ ಅಲ್ಲಿಗಾಗಮಿಸಿದ ಕೆಲವರು ಇಲ್ಲೇ ಪಕ್ಕದ ಕಲ್ಲಗುಡ್ಡೆ ಕ್ರಾಸ್ನಲ್ಲಿಯೂ ದುರ್ವಾಸನ ಬರುತ್ತಿದೆ ಎಂದು ಹೇಳಿದರು.
ಈ ವೇಳೆ ಸ್ಥಳಕ್ಕಾಗಮಿಸಿದ ಸಂಪ್ಯ ಠಾಣಾ ಎಸ್.ಐ. ರವಿ ಹಾಗೂ ಸ್ಥಳೀಯರು ಕಲ್ಲಗುಡ್ಡೆಯಲ್ಲಿ ಹುಡುಕಾಡಿದಾಗ ನಿರ್ಜನ ಪ್ರದೇಶದ ಪೊದರಿನಲ್ಲಿ ಚೀಲದೊಳಗೆ ಕೈ ಹಾಗೂ ಕಾಲು ಇರುವುದು ಪತ್ತೆಯಾಗಿದೆ. ಇದರಿಂದ ಮತ್ತಷ್ಟು ಸಂಶಯಗೊಂಡ ಪೊಲೀಸರು ಹಾಗೂ ಸಾರ್ವಜನಿಕರು ಮತ್ತೆ ಹುಡುಕಾಟ ನಡೆಸಿದಾಗ ಸ್ವಲ್ಪವೇ ದೂರದಲ್ಲಿ ಕರಿಮಣಿ ಸರ ಹಾಗೂ ನೀಲಿ ಬಣ್ಣದ ಸೀರೆ ಪತ್ತೆಯಾಗಿದೆ.
ಈ ಎಲ್ಲಾ ಘಟನೆಗಳನ್ನು ತಾಳೆ ಹಾಕಿದಾಗ ತಲೆ ಬರುಡೆ, ಕೈ ಕಾಲು ಹಾಗೂ ಕರಿಮಣಿ ಮತ್ತು ಸೀರೆ ಓರ್ವ ಮಹಿಳೆಗೆ ಸೇರಿದ್ದಾಗಿದ್ದು ಆಕೆಯನ್ನು ಎಲ್ಲಿಯೋ ಕೊಲೆಗೈದು ಇಲ್ಲಿ ಎಸೆದಿರಬಹುದು ಇಲ್ಲವೇ ಪುರುಷನ ತಲೆ ಬರುಡೆ, ಕೈಕಾಲು ಹಾಗೂ ಸೀರೆ ಮತ್ತು ಕರಿಮಣಿಗೆ ಪರಸ್ಪರ ಸಂಬಂಧ ಇಲ್ಲದೆಯೂ ಇರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಆಸುಪಾಸಿನಲ್ಲಿ ಯಾರೂ ನಾಪತ್ತೆಯಾದ ಬಗ್ಗೆ ಇದುವರೆಗೆ ಮಾಹಿತಿ ಲಭ್ಯವಾಗದೇ ಇರುವುದರಿಂದ ಬೇರೆ ಎಲ್ಲಿಯೋ ಕೊಲೆ ನಡೆಸಿ ಇಲ್ಲಿ ಬಂದು ಎಸೆದಿರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ವಿವಿಧೆಡೆ ನಾಪತ್ತೆಯಾಗಿರುವವರ ಪಟ್ಟಿಯನ್ನು ಪರಿಶೀಲಿಸುವ ಕಾರ್ಯ ಆರಂಭಿಸಿದ್ದಾರೆ.
ಎಎಸ್ಪಿ ಭೇಟಿ: ಎಡಿಷನಲ್ ಎಸ್ಪಿ ವಿನ್ಸೆಂಟ್ ಶಾಂತಕುಮಾರ್, ಪುತ್ತೂರು ಎಎಸ್ಪಿ ರಿಷ್ಯಂತ್ರವರು ರಾತ್ರಿ ವೇಳೆ ತಲೆಬುರುಡೆ ಪತ್ತೆಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.