ಮಂಗಳೂರು,ಡಿ.17: ಇತಿಹಾಸ ಪ್ರಸಿದ್ದ ನಾಗಾರಾಧನಾ ಕ್ಷೇತ್ರ ಕುಡುಪು ಶ್ರೀ ಅನಂತ ಪದ್ಮನಾಭ ದೇವಳದಲ್ಲಿ ಬುಧವಾರ ಸ್ಕಂದ ಪಂಚಮಿ ಉತ್ಸವ ಹಾಗೂ ಗುರುವಾರ ಷಷ್ಠಿ ಮಹೋತ್ಸವವು ಬಹಳ ವಿಜೃಂಭಣೆಯಿಂದ ವಿಧಿವತ್ತಾಗಿ ಜರುಗಿತು. ಕಳೆದ ಬಾರಿ 2 ಕೋಟಿ ವೆಚ್ಚದಲ್ಲಿ ನವೀಕರಣಗೊಂಡ ಗರ್ಭಗೃಹದಲ್ಲಿ ದೇವರಿಗೆ ವಿಶೇಷ ಪೂಜಾ ವಿಧಿವಿಧಾನಗಳನ್ನು ನೇರವೇರಿಸಲಾಯಿತು.
ದೇವತಾ ಪೂಜಾ ಕಾರ್ಯವು ಬೆಳಿಗ್ಗೆ 5 ಗಂಟೆಗೆ ಪ್ರಾರಂಭವಾಗಿದ್ದು, ಬಳಿಕ ಭಕ್ತಾಧಿಗಳಿಂದ ಅಂಗ ಪ್ರದಕ್ಷಿಣೆ (ಉರುಳು ಸೇವೆ ), ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಾಮೃತ ಅಭಿಷೇಕ, ನವಕ ಕಲಶಾಭಿಷೇಕ, ವಿವಿಧ ಅರ್ಚನೆಗಳು, ವಿಶೇಷ ಹರಿವಾಣ, ನಾಗಬನದಲ್ಲಿ ವಿಶೇಷ ನಾಗತಂಬಿಲ ಸೇವೆ, ನೈವೇದ್ಯ, ಮಧ್ಯಾಹ್ನ ಸರ್ವಾಭರಣ ಭೂಷಿತ ಶ್ರೀ ಅನಂತ ಪದ್ಮನಾಭ ದೇವರಿಗೆ ಪಂಚಮಿಯ ಮಹಾಪೂಜೆ ಹಾಗೂ ಮಹಾಅನ್ನ ಸಂತರ್ಪಣೆ ನಡೆಯಿತು.
ರಾತ್ರಿ ಸವಾರಿ ಬಲಿ, ಕಟ್ಟೆಪೂಜೆ, ಅಶ್ವವಾಹನೋತ್ಸವ, ಕಳೆದ ವರ್ಷ ಸುಮಾರು 60 ಲಕ್ಷ ರೂಪಾಯಿ ವೆಚ್ಚದಲ್ಲಿ ನವೀಕರಣಗೊಂಡ ಅತೀ ವಿಶಿಷ್ಟವೆನಿಸಿದ ಭದ್ರಾ ಸರಸ್ವತಿ ತೀರ್ಥ ಸರೋವರದಲ್ಲಿ ತೆಪೋತ್ಸವ, ದೇವರಿಗೆ ಅತ್ಯಂತ ಪ್ರೀತಿಯೆನಿಸಿದ ವಿಶೇಷ ಅಷ್ಟಾವಧಾನ ಸೇವೆ, ಎರಡನೇ ಬಲಿ ಚಂದ್ರಮಂಡಲ ಉತ್ಸವ, ಅಶ್ವವಾಹನೋತ್ಸವ, ಪಾಲಕಿ ಉತ್ಸವ, ಹಾಗೂ ಪ್ರಸಾದ ವಿತರಣೆಯು ನಡೆಯಿತು.
ಈ ಸಂದರ್ಭದಲ್ಲಿ ಸಹಸ್ರಾರು ಭಕ್ತರು ಶ್ರೀಕ್ಷೇತ್ರಕ್ಕೆ ಆಗಮಿಸಿ ದೇವರಿಗೆ ಬೆಳ್ಳಿಯ ಮೂರ್ತಿಗಳನ್ನು ಹರಕೆ ರೂಪದಲ್ಲಿ ಸಲ್ಲಿಸಿದರು. ದೇವಾಲಯದ ಹೊರಾಂಗಣದಲ್ಲಿ ಉರುಳು ಸೇವೆಯೊಂದಿಗೆ ಪಂಚಮಿ ಮಹೋತ್ಸವ ಜರುಗಿತು.
ವೈಭವದ ಷಷ್ಠಿ ಬ್ರಹ್ಮರಥೋತ್ಸವ :
ಇಂದು ಕುಡುಪು ಶ್ರೀ ಆನಂತಪದ್ಮನಾಭ ದೇಗುಲದಲ್ಲಿ ವೈಭವದ ಷಷ್ಠಿ ಬ್ರಹ್ಮರಥೋತ್ಸವದೊಂದಿಗೆ ಷಷ್ಠಿ ಮಹೋತ್ಸವ ಸಮಾಪನಗೊಂಡಿತ್ತು. ಶ್ರೀ ದೇವರಿಗೆ ಉಷ:ಕಾಲ ಪೂಜೆ, ವಿಶೇಷ ನವಕ ಕಲಾಶಾಭಿಷೇಕ, ಪಂಚಾಮೃತ ಅಭಿಷೇಕ ವಿವಿಧ ಆರ್ಚನೆಗಳೊಂದಿಗೆ ನೆರವೇರಿತು. ಮಧ್ಯಾಹ್ನ ಒಂದು ಗಂಟೆಗೆ ಬಲಿ ಹೊರಟು ರಥಾರೋಹಣ, ಬ್ರಹ್ಮರಥೋತ್ಸವ ಜರಗಿತು. ನಾಳೆ (ಡಿ.೧೮ರಂದು) ಜೋಡು ದೇವರ ಬಲಿ ಉತ್ಸವ ಸಂಪನ್ನಗೊಳ್ಳಲಿದೆ.