ಕನ್ನಡ ವಾರ್ತೆಗಳು

ಮಂಗಳೂರಿನಲ್ಲಿ ನಾಪತ್ತೆಯಾದ ಮಹಿಳೆಯ ಶವ ಸುಟ್ಟ ಸ್ಥಿತಿಯಲ್ಲಿ ಬಜ್ಪೆ ಸಮೀಪ ಪತ್ತೆ : ಕುಟುಂಬಸ್ಥರಿಂದ ಕೊಲೆ ಆರೋಪ

Pinterest LinkedIn Tumblr

Usha_murder_yekkar_1

ಬಜಪೆ, ಡಿ.18 : ಮಂಗಳೂರಿನಲ್ಲಿ ಗುರುವಾರ ನಾಪತ್ತೆಯಾಗಿದ್ದ ಗೃಹಿಣಿಯೊಬ್ಬರ ಶವ ಇಂದು ಬಜಪೆ ಸಮೀಪದ ಎಕ್ಕಾರು ಬಳಿಯ ಗುಡ್ಡೆಸ್ಥಾನದ ತೋಡಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತ ಮಹಿಳೆಯನ್ನು ಜಪ್ಪಿನ ಮೊಗರು ನಿವಾಸಿ (ಅಶ್ವಿನ್ ಶೆಟ್ಟಿ ಎಂಬವರ ಪತ್ನಿ) ಉಷಾ ಶೆಟ್ಟಿ (29) ಎಂದು ಗುರುತಿಸಲಾಗಿದೆ.

ಮಂಗಳೂರಿನ ಮಾಂಡವಿ ಶೋರೋಂನಲ್ಲಿ ಕೆಲಸ ಮಾಡುತ್ತಿದ್ದ ಜಪ್ಪಿನ ಮೊಗರು ನಿವಾಸಿ ಉಷಾ ಶೆಟ್ಟಿ ನಿನ್ನೆ ಮಧ್ಯಾಹ್ನದಿಂದ ನಾಪತ್ತೆಯಾಗಿರುವ ಬಗ್ಗೆ ಪತಿ ಅಶ್ವಿನ್ ಶೆಟ್ಟಿಯವರು ಮಂಗಳೂರು ಪೋಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಪೊಲೀಸರು ತನಿಖೆ ನಡೆಸುತ್ತಿದ್ದ ಸಂದರ್ಭ ಮಹಿಳೆಯ ಮೊಬೈಲ್ ಸಿಗ್ನಲ್ ಟವರ್ ಲೊಕೇಶನ್ ಎಕ್ಕಾರಿನಲ್ಲಿ ತೋರಿಸುತ್ತಿತ್ತು.

ತಕ್ಷಣ ಕಾರ್ಯಪ್ರವೃತರಾದ ಪೊಲೀಸರು ಸ್ಥಳೀಯರ ಸಹಕಾರದೊಂದಿಗೆ ಬಜಪೆ ಸಮೀಪದ ಎಕ್ಕಾರು ಸಮೀಪ ಹುಡುಕಾಟ ನಡೆಸಿದಾಗ, ಇಂದು ಸಂಜೆ ಎಕ್ಕಾರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಹೋಗುವ ರಸ್ತೆ ಬದಿಯಲ್ಲಿರುವ ಚರಂಡಿಯಂತಹ ಸ್ಥಳದಲ್ಲಿ ಸುಟ್ಟ ಸ್ಥಿತಿಯಲ್ಲಿ ಉಷಾ ಶೆಟ್ಟಿಯವರ ಶವ ಪತ್ತೆಯಾಗಿದೆ. ಶವದ ಸಮೀಪ ಪೆಟ್ರೋಲ್ ಬಾಟಲ್, ಬ್ಯಾಗ್, ಮದ್ದಿನ ಚೀಟಿ ಪತ್ತೆಯಾಗಿದ್ದು, ಅನುಮಾನಕ್ಕೆ ಎಡೆಮಾಡಿದೆ. ಮೃತ ಮಹಿಳೆ ಇಬ್ಬರು ಮಕ್ಕಳನ್ನು ಹೊಂದಿದ್ದಾರೆ ಎಂದು ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ಗುರುವಾರ ಸಂಜೆ ಸುಮಾರು 3 ಗಂಟೆಯ ಹೊತ್ತಿಗೆ ಈ ಮಹಿಳೆ ಎಕ್ಕಾರಿನ ಅಂಗಡಿಯೊಂದಕ್ಕೆ ಆಗಮಿಸಿ, ಬಳಿಕ ಕಟೀಲು ಕಡೆಯಿಂದ ಬಂದ ಕಾರೊಂದರಲ್ಲಿ ಹತ್ತಿ ಹೋಗಿದ್ದನ್ನು ಕಂಡಿರುವ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಇದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಉನ್ನತ್ತ ಮಟ್ಟದ ತನಿಖೆಗೆ ಆದೇಶ ನೀಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಈ ನಿಗೂಡ ಸಾವಿನ ಬಗ್ಗೆ ಪ್ರಕರಣ ದಾಖಲಿಸಿರುವ ಬಜಪೆ ಪೋಲೀಸರು ಉನ್ನತ ಮಟ್ಟದ ತನಿಖೆ ಆರಂಭಿಸಿದ್ದಾರೆ.

ಕುಟುಂಬಸ್ಥರಿಂದ ಕೊಲೆ ಆರೋಪ :

ಗುರುವಾರ ಮಧ್ಯಾಹ್ನದಿಂದ ನಾಪತ್ತೆಯಾಗಿದ್ದ ಉಷಾ ಶೆಟ್ಟಿ ಅವರ ಶವ ಸುಟ್ಟು ಹೋಗಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಉಷಾ ಶೆಟ್ಟಿಯನ್ನು ಯಾರೋ ದುಷ್ಕರ್ಮಿಗಳು ಕೊಲೆ ಮಾಡಿ ಸುಟ್ಟುಹಾಕಿದ್ದಾರೆಂದು ಮೃತ ಮಹಿಳೆಯ ಕುಟುಂಬಸ್ಥರು ಆರೋಪಿಸಿದ್ದಾರೆ.

Write A Comment