ಮಂಗಳೂರು, ಡಿ.19 : ಸಮಾಜದಲ್ಲಿ ಭಿನ್ನಾಭಿಪ್ರಾಯಗಳು ಸಹಜ ಪ್ರಕ್ರಿಯೆಯಾಗಿದ್ದು, ಅದನ್ನು ಸಾಂಸ್ಕೃತಿಕ ವಿವೇಕದೊಂದಿಗೆ ಕ್ರೋಡೀಕರಿಸಬೇಕೇ ಹೊರತು ವೈಭವೀಕರಿಸುವುದು ಸರಿಯಲ್ಲ ಎಂದು ಹಂಪಿ ಕನ್ನಡ ವಿಶ್ವವಿದ್ಯಾನಿಲಯ ಪ್ರಾಧ್ಯಾಪಕ, ಖ್ಯಾತ ವಿಮರ್ಶಕ ಪ್ರೊ.ರಹಮತ್ ತರಿಕೆರೆ ಅಭಿಪ್ರಾಯಿಸಿದ್ದಾರೆ.
ಅವರು ಶುಕ್ರವಾರ ಕರ್ನಾಟಕ ಸಾಹಿತ್ಯ ಅಕಾಡಮಿ ಬೆಂಗಳೂರು, ಪದವಿಪೂರ್ವ ಶಿಕ್ಷಣ ಇಲಾಖೆ, ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜು ಕನ್ನಡ ಉಪನ್ಯಾಸಕರ ಸಂಘದ ಜಂಟಿ ಆಶ್ರಯದಲ್ಲಿ ರಾಮಕೃಷ್ಣ ಪದವಿ ಪೂರ್ವ ಕಾಲೇಜಿನ ಎ.ಬಿ. ಶೆಟ್ಟಿ ಸಭಾಂಗಣದಲ್ಲಿ ನಡೆದ ಕನ್ನಡ ನಾಡು-ನುಡಿ ಕುರಿತಾದ ವಿಚಾರಗೋಷ್ಠಿ ಮತ್ತು ವಿದ್ಯಾರ್ಥಿ ಕವಿಗೋಷ್ಠಿ ಉದ್ಘಾಟಿಸಿ ಮಾತನಾಡುತ್ತಿದ್ದರು.
ರಾಜಪ್ರಭುತ್ವ ಕಾಲದಿಂದಲೇ ಪ್ರಜಾಪ್ರಭುತ್ವ ತೆರೆ ದುಕೊಂಡಿದೆ. ಭಾರತದ ಸೌಭಾಗ್ಯವೇ ಪ್ರಭುತ್ವ, ಅದರ ಮಹತ್ವ ವಿದೇಶಕ್ಕೆ ಹೋದಾಗ ಅರಿವಾಗುತ್ತದೆ. ವೈವಿಧ್ಯವನ್ನು ನಾವು ಸಂಭಾಳಿಸಿಕೊಂಡು ಹೋಗಬೇಕು ಎಂದವರು ಹೇಳಿದರು. ವಿಜಯಪುರ ಹೊರತುಪಡಿಸಿದರೆ ರಾಜ್ಯದಲ್ಲಿ ಐತಿ ಹಾಸಿಕ, ಸುಸಂಸ್ಕೃತ, ಜಾತಿ, ಧರ್ಮ, ಭಾಷೆಯನ್ನು ಮೀರಿ ನಿಂತ ಸಾಂಸ್ಕೃತಿಕ ಜಿಲ್ಲೆ ಈ ತುಳುನಾಡು. ಇಲ್ಲಿ ಸಮಾಜ ಸಹನೆ ಕಳೆದುಕೊಳ್ಳುವುದು ಶೋಭೆಯಲ್ಲ ಎಂದು ರಹಮತ್ ತರಿಕರೆ ಹೇಳಿದರು. ಬದ್ರಿಯಾ ಪಿಯು ಕಾಲೇಜು ಪ್ರಾಂಶುಪಾಲ ಡಾ. ಇಸ್ಮಾಯೀಲ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬಹುಮಾನ ವಿತರಣೆ: ವಿದ್ಯಾರ್ಥಿಗಳಿಗೆ ಏರ್ಪಡಿಸಿದ್ದ ಕವನ ಸ್ಪರ್ಧೆಯಲ್ಲಿ ವಿಜೇತರಾದ ಜಿ.ಅತ್ರೇಯ, ನಾರಾಯಣ ಭಟ್, ಆಶ್ರುದ್ಧ ಗೌಡ, ಅನಂತ ಪದ್ಮನಾಭ, ಮತ್ತಿತರಿಗೆ ಬಹುಮಾನಗಳನ್ನು ಇದೇ ವೇಳೆ ವಿತರಿಸಲಾಯಿತು. ಕರ್ನಾಟಕ ಸಾಹಿತ್ಯ ಅಕಾಡಮಿಯ ಸದಸ್ಯ ಮೇಟಿ ಮುದಿಯಪ್ಪ ಆಶಯ ಭಾಷಣ ಮಾಡಿದರು. ರಾಮಕೃಷ್ಣ ಪ.ಪೂ. ಕಾಲೇಜು ಪ್ರಾಂಶುಪಾಲ ಕಿಶೋರ್ಕುಮಾರ್ ರೈ ಶೇಣಿ ಉಪಸ್ಥಿತರಿದ್ದರು.
ಪದಕ ಕಾರ್ಯದರ್ಶಿ ಗಾಯತ್ರಿ ಎಂ.ಎಸ್. ವಂದಿಸಿದರು. ವಾಸುದೇವ ಬೆಳ್ಳೆ ನಿರೂಪಿಸಿದರು.