ಮಂಗಳೂರು, ಡಿ.20: ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ವತಿಯಿಂದ 2014ನೆ ಸಾಲಿನ ಅಕಾಡಮಿ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಸಮಾರಂಭ ಶನಿವಾರ ಅಕಾಡಮಿ ಚಾವಡಿಯಲ್ಲಿ ಜರಗಿತು.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಗೌರವ ಪ್ರಶಸ್ತಿ ಹಾಗೂ ಪುಸ್ತಕ ಬಹುಮಾನ ಪ್ರದಾನ ಮಾಡಿದರು. ತುಳು ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸುವುದರಲ್ಲಿ ತುಳು ನಾಟಕ, ಚಲನಚಿತ್ರ, ಸಾಹಿತ್ಯ, ಮಾಧ್ಯಮಗಳ ಕೊಡುಗೆ ಅಪಾರ. ಇದಕ್ಕೆ ಪೂರಕವಾಗಿ ಶಾಲೆಗಳಲ್ಲಿ ಕನಿಷ್ಠ ಒಂದೆರಡು ತುಳು ಭಾಷೆಯ ಕಾರ್ಯಕ್ರಮಗಳು ನಡೆಯುವ ಅಗತ್ಯವಿದೆ ಎಂದು ಅವರು ಹೇಳಿದರು.
ತುಳು ಭಾಷೆಯ ಬಗ್ಗೆ ಅಭಿಮಾನ ಹೆಚ್ಚಾಗಿದೆ. ಕಾರ್ಯಕ್ರಮಗಳಲ್ಲಿ ತುಳುವಿನಲ್ಲೇ ಮಾತನಾಡಲು ಮುಜುಗರಪಡುವ ಪ್ರವೃತ್ತಿ ದೂರವಾಗಿದೆ. ಮದುವೆ ಕಾಗದಗಳನ್ನು ತುಳುವಿನಲ್ಲೇ ಮುದ್ರಿಸುತ್ತಿರುವುದು ಉತ್ತಮ ಬೆಳವಣಿಗೆ ಎಂದವರು ಹೇಳಿದರು. ತುಳು ಭಾಷೆಯನ್ನು 8ನೆ ಪರಿಚ್ಛೇದಕ್ಕೆ ಸೇರಿಸುವು ದರಲ್ಲಿ ಕೆಲವು ತಾಂತ್ರಿಕ ಅಡಚಣೆಗಳಿವೆ ಎಂಬ ವಿಚಾರ ಕೇಳಿದ್ದೇನೆ. ಇದನ್ನು ಅಕಾಡಮಿ ಬಗೆಹರಿಸಿದರೆ, 8ನೆ ಪರಿಚ್ಛೇದಕ್ಕೆ ಸೇರಿಸಲು ಅಗತ್ಯ ಒತ್ತಡ ಹಾಕುವುದಾಗಿ ಹೆಗ್ಗಡೆ ಭರವಸೆ ನೀಡಿದರು.
2014ನೆ ಸಾಲಿನ ಅಕಾಡಮಿ ಗೌರವ ಪ್ರಶಸ್ತಿಯನ್ನು ಜೀವಮಾನದ ಸಾಧನೆಗಾಗಿ ಸಾಹಿತ್ಯ ಕ್ಷೇತ್ರದಲ್ಲಿ ಡಾ.ಕನರಾಡಿ ವಾದಿರಾಜ ಭಟ್, ನಾಟಕ ಕ್ಷೇತ್ರದಲ್ಲಿ ಎಂ.ಕೆ. ಸೀತಾರಾಮ್ ಕುಲಾಲ್, ಸಿನೆಮಾ ಕ್ಷೇತ್ರದಲ್ಲಿ ರಾಮ್ ಶೆಟ್ಟಿಯವರಿಗೆ ಪ್ರದಾನ ಮಾಡಲಾಯಿತು. ಕವನ ವಿಭಾಗದಲ್ಲಿ ಶಾರದಾ ಎ.ಅಂಚನ್ರಿಗೆ ನೀಡಲಾಯಿತು.
ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾ ನಿಲಯದ ವಿಶ್ರಾಂತ ಕುಲಪತಿ ಡಾ.ಬಿ.ಎ.ವಿವೇಕ ರೈ ಆಶಯ ಭಾಷಣ ಮಾಡಿದರು. ಅಕಾಡಮಿಯ ಅಧ್ಯಕ್ಷೆ ಎಂ.ಜಾನಕಿ ಬ್ರಹ್ಮಾವರ ಅಧ್ಯಕ್ಷತೆ ವಹಿಸಿದ್ದರು. ದ.ಕ. ಜಿಪಂ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅತಿಥಿಯಾಗಿದ್ದರು.
ಅಕಾಡಮಿಯ ಸದಸ್ಯರಾದ ಪ್ರೊ.ಡಿ.ವೇದಾವತಿ, ಜಯಶೀಲ, ರಘು ಇಡ್ಕಿದು, ಮೋಹನ್ ಕೊಪ್ಪಲ ಕದ್ರಿ, ರೂಪಕಲಾ ಆಳ್ವ, ಕೆ.ಟಿ.ವಿಶ್ವನಾಥ ಉಪಸ್ಥಿತರಿದ್ದರು.
ಅಕಾಡಮಿಯ ಸದಸ್ಯ ಡಿ.ಎಂ.ಕುಲಾಲ್ ಸ್ವಾಗತಿಸಿದರು. ಸದಸ್ಯ ಕುಂಬ್ರ ದುರ್ಗಾಪ್ರಸಾದ್ ರೈ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಡಾ.ದಿವಾ ಕೊಕ್ಕಡ ವಂದಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಮಚ್ಚೇಂದ್ರನಾಥ್ ಹಾಗೂ ಸಿಂಧೂ ಭೈರವಿಯವರ ಸ್ಯಾಕೋ್ಸೆೆನ್ ವಾದನ ಕಾರ್ಯಕ್ರಮ ನಡೆಯಿತು. ಸಭಾ ಕಾರ್ಯ ಕ್ರಮದ ಬಳಿಕ ಜನಪದ ನಲಿಕೆ ಕಾರ್ಯಕ್ರಮ ನಡೆಯಿತು.