ಮಂಗಳೂರು, ಡಿ.21: ಕರ್ನಾಟಕ ಸರಕಾರದ ಆಯುಷ್ ಇಲಾಖೆ, ದ.ಕ. ಜಿಲ್ಲಾ ಡಳಿತ ಹಾಗೂ ಆಯುಷ್ ಫೌಂಡೇಶನ್ಗಳ ಸಂಯುಕ್ತ ಆಶ್ರಯದಲ್ಲಿ ಪಿಲಿಕುಳದ ಡಾ.ಶಿವರಾಮ ಕಾರಂತ ನಿಸರ್ಗಧಾಮದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಆಯುಷ್ ಹಬ್ಬದ ಸಮಾರೋಪ ಸಮಾರಂಭ ರವಿವಾರ ನಡೆಯಿತು.
ಸಮಾರೋಪ ಭಾಷಣ ಮಾಡಿದ ಯುವಜನ ಸೇವೆ ಹಾಗೂ ಕ್ರೀಡೆ ಸಚಿವ ಅಭಯಚಂದ್ರ ಜೈನ್ ಅವರು, ಅಲೋಪತಿ ಚಿಕಿತ್ಸೆಯು ಪ್ರಬಲವಾಗಿರುವ ನಡುವೆಯೂ ಆಯುಷ್ ಚಿಕಿತ್ಸಾ ಪದ್ಧತಿ ಇಂದಿಗೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ ಎಂದು ಹೇಳಿದರು.
ಪಿಲಿಕುಳದಲ್ಲಿ ಆಯುಷ್ ಹಬ್ಬವನ್ನು ವ್ಯವಸ್ಥಿತ ರೀತಿಯಲ್ಲಿ ನಡೆಸುವ ಮೂಲಕ ರಾಜ್ಯದ ಜನತೆಗೆ ಭಾರತೀಯ ವೈದ್ಯ ಪದ್ಧತಿಯ ಬಗ್ಗೆ ಉತ್ತಮ ಸಂದೇಶ ನೀಡಲಾಗಿದೆ ಎಂದವರು ಹೇಳಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಸಕರಾದ ಜೆ.ಆರ್.ಲೋಬೊ, ಕ್ಯಾ.ಗಣೇಶ್ ಕಾರ್ಣಿಕ್ ಸಂದಭೋಚಿತವಾಗಿ ಮಾತನಾಡಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಆಯುಷ್ ಹಬ್ಬದ ಅಧ್ಯಕ್ಷೆ ಡಾ.ಆಶಾಜ್ಯೋತಿ ರೈ, ಮೂಡುಶೆಡ್ಡೆ ಗ್ರಾಪಂ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ, ನಿಸರ್ಗಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಪ್ರಭಾಕರ್ ಶರ್ಮ, ಜಿಲ್ಲಾ ಆಯುಷ್ ಅಧಿಕಾರಿ ಡಾ. ದೇವದಾಸ್, ಎನ್.ಟಿ.ಅಂಚನ್, ಮುಹಮ್ಮದ್ ಇಕ್ಬಾಲ್, ಡಾ.ನಾರಾಯಣ, ಮಹಾವೀರ್ ಮೊದಲಾದವರು ಉಪಸ್ಥಿತರಿದ್ದರು.
2,500 ಮಂದಿಗೆ ಆಯುಷ್ ಆರೋಗ್ಯ ಕಾರ್ಡ್ ವಿತರಣೆ
ಸಮಾರೋಪ ಸಮಾರಂಭದಲ್ಲಿ ಆಯುಷ್ ಹಬ್ಬದ ಎರಡು ದಿನಗಳ ಕಾರ್ಯಕ್ರಮದ ವರದಿ ಮಂಡಿಸಿದ ಡಾ.ಸತೀಶ್ಕೃಷ್ಣ, ಪ್ರಥಮ ದಿನ ಆಯುಷ್ ಹಬ್ಬದಲ್ಲಿ ಸುಮಾರು 15,000 ಮಂದಿ ಭಾಗವಹಿಸಿದ್ದರೆ, ರವಿವಾರ ಸುಮಾರು 12,000 ಮಂದಿ ಭಾಗ ವಹಿಸಿದ್ದಾರೆ. ಎರಡು ದಿನಗಳಲ್ಲಿ ಸುಮಾರು 2,500 ಮಂದಿ ಆಸಕ್ತರಿಗೆ ಆಯುಷ್ ಆರೋಗ್ಯ ಕಾರ್ಡ್ ವಿತರಿಸಲಾಗಿದೆ ಎಂದು ತಿಳಿಸಿದರು.