ಉಳ್ಳಾಲ,ಡಿ.21 : ಕೋಟೆಕಾರು ಸಮೀಪದ ಬೀರಿ ಚೆಕ್ ಪೋಸ್ಟ್ ಬಳಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಇಂದು ಬೆಳಿಗ್ಗೆ ಕಾರು ಮತ್ತು ಬಸ್ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಅಲ್ಪಸ್ವಲ್ಪ ಗಾಯಗೊಂಡ ಘಟನೆ ಸಂಭವಿಸಿದೆ.
ಕಾರು ಚಾಲಕ ಉಪ್ಪಳ ನಿವಾಸಿ ಅಝೀಂ(23) ಮಂಗಳೂರಿನಿಂದ ಉಪ್ಪಳ ಕಡೆಗೆ ಕಾರಿನಲ್ಲಿ ತೆರಳುತ್ತಿದ್ದ ಸಂದರ್ಭ ಚೆಕ್ ಪೋಸ್ಟ್ ಎದುರುಗಡೆ ರಾ.ಹೆ.ಯಲ್ಲಿ ನಿಲ್ಲಿಸಿದ್ದ ಲಾರಿಯನ್ನು ತಪ್ಪಿಸಿ ಎದುರಿಗೆ ತೆರಳುತ್ತಿದ್ದಂತೆ ಕಾಸರಗೋಡಿನಿಂದ ಮಂಗಳೂರಿಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ. ಚಾಲಕ ಅಝೀಂ ಪವಾಡಸದೃಶವಾಗಿ ಪಾರಾಗಿದ್ದಾರೆ.
ಘಟನೆ ನಡೆದ ಸ್ಥಳದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದು, ಉಳ್ಳಾಲ ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಅಲ್ಲಿಂದ ಚದುರಿಸಿದರು.
ಇದೇ ಸಂದರ್ಭ ಘಟನಾ ಸ್ಥಳಕ್ಕೆ ಕಂಠಪೂರ್ತಿ ಕುಡಿದಿದ್ದ ಮಧ್ಯವಯಸ್ಕನೋರ್ವ ಆಗಮಿಸಿ ಪೊಲೀಸರ ಜತೆಗೆ ಅನುಚಿತವಾಗಿ ವರ್ತಿಸಲು ಆರಂಭಿಸಿದ್ದನು. ಮೊದಲಿಗೆ ಪೊಲೀಸರು ಎಚ್ಚರಿಕೆಯನ್ನು ನೀಡಿದರೂ, ಆತ ದುರ್ವತನೆಯನ್ನು ಮುಂದುವರಿಸಲು ತೊಡಗಿದಾಗ ರೊಚ್ಚಿಗೆದ್ದ ಪೊಲೀಸರು ಅತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದಾರೆ.