ಮೂಡುಬಿದಿರೆ, ಡಿ.21: ಬೆಳುವಾಯಿ ಮಠದ ಕೆರೆಗೆ ಈಜು ಕಲಿಯಲು ನೀರಿಗಿಳಿದ ಕಾಲೇಜ್ ವಿದ್ಯಾರ್ಥಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ರವಿವಾರ ನಡೆದಿದೆ.ಮೃತ ವಿದ್ಯಾರ್ಥಿ ಮಾರ್ಪಾಡಿ ಗ್ರಾಮದ ಕೋಟೆಬಾಗಿಲು ನಿವಾಸಿ ಆಕಾಶ್ ರೈ(17)ಎಂದು ತಿಳಿದುಬಂದಿದೆ.
ಈತ ಸ್ಥಳೀಯ ಬಿಜೆಪಿ ಮುಖಂಡ ಮಂಜುನಾಥ ರೈ ಅವರ ಹಿರಿಯ ಪುತ್ರ. ಮಹಾವೀರ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯಾಗಿದ್ದು, ಈತ ಸೇರಿದಂತೆ ನಾಲ್ವರು ಸ್ನೇಹಿತರು ಈಜಲು ಬೆಳುವಾಯಿ ಮಠದ ಕೆರೆಗೆ ಬಂದಿದ್ದರು. ಆಕಾಶ್ ಮುಳುಗುತ್ತಿದ್ದ ಸಂದರ್ಭದಲ್ಲಿ ಈಜಲು ಬಂದಿದ್ದ ಸುಮಾರು 20 ಮಂದಿ ಅಲ್ಲಿದ್ದರೂ ಅವರ್ಯಾರು ಯುವಕನ ರಕ್ಷಣೆಗೆ ಬರಲಿಲ್ಲ ಎನ್ನಲಾಗಿದೆ.
ಬಳಿಕ ಸುದ್ದಿ ತಿಳಿದು ನಿವೃತ್ತ ಜಲಂತರ್ಗಾಮಿ ಜಯ ಶೆಟ್ಟಿ, ಅಂತೋನಿ ಮೆನೇಜಸ್, ಜಾನ್ ಮತ್ತಿತರ ಸ್ಥಳೀಯ ಕೆಲವರು ಧಾವಿಸಿ ಬಂದು ನೀರಿಗಿಳಿದು ಮೃತದೇಹವನ್ನು ಮೇಲೆಕ್ಕೆತ್ತುವಲ್ಲಿ ನೆರವಾದರೆನ್ನಲಾಗಿದೆ. ಮೂಡುಬಿದಿರೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.