ಮಂಗಳೂರು, ಡಿ.21: ಸುರತ್ಕಲ್ ಗ್ರಾಮದ ರಾಷ್ಟೀಯ ಹೆದ್ದಾರಿ 66 ರ ಎನ್ಐಟಿಕೆ ಕಾಲೇಜು ಬಳಿ ಅರಣ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮ ಕಟ್ಟಿಗೆ ಸಾಗಾಟ ಪ್ರಕರಣವೊಂದನ್ನು ಪತ್ತೆಹಚ್ಚಲಾಗಿದ್ದು, ವಾಹನ ಮತ್ತು ಮರವನ್ನು ಸ್ವಾಧೀನಪಡಿಸಿ ಕೊಂಡಿದ್ದಾರೆ.
ಆರೋಪಿಗಳು ಲಾರಿಯೊಂದರಲ್ಲಿ ಅಧಿಕೃತ ದಾಖಲೆಗಳಿಲ್ಲದೆ ವಿವಿಧ ಜಾತಿಯ ಮರದ 6.೦೦೦ ಘ.ಮೀ. ಕಟ್ಟಿಗೆಗಳನ್ನು ಸಾಗಾಟ ಮಾಡುತ್ತಿದ್ದರು. ಈ ಬಗ್ಗೆ ಮಾಹಿತಿ ಪಡೆದ ಅರಣ್ಯ ಇಲಾಖೆ, ಕಾರ್ಯಾಚರಣೆ ನಡೆಸಿ ಸೊತ್ತುಗಳನ್ನು ಸ್ವಾಧೀನಪಡಿಸಿಕೊಂಡಿದೆ. ಈ ಸಂದರ್ಭ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ಕಾರ್ಯಾಚರಣೆಯಲ್ಲಿ ಮಂಗಳೂರು ವಲಯ ಅರಣ್ಯಾಧಿಕಾರಿ ಪಿ. ಶ್ರೀಧರ, ಸಿಬ್ಬಂದಿಗಳಾದ ಉಪವಲಯ ಅರಣ್ಯಾಧಿಕಾರಿ ಅಶ್ವಿತ್ ಕೆ. ಗಟ್ಟಿ, ಪ್ರೀತಮ್, ರವಿಕುಮಾರ್ ಅರಣ್ಯ ರಕ್ಷಕರಾದ ಜಿತೇಶ್ ಪಿ. ಹಾಗೂ ಚಾಲಕ ಸೂರಜ್ ಸುವರ್ಣ ಪಾಲ್ಗೊಂಡಿದ್ದರು. ಮಂಗಳೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕೆ.ಟಿ. ಹನುಮಂತಪ್ಪ, ಅವರ ನಿರ್ದೇಶನದಂತೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಅಬ್ಬಾಸ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.