ಕಾರ್ಕಳ, ಡಿ.23 : ಬೈಕ್ ಪಲ್ಟಿಯಾಗಿ ಸವಾರ ಗಂಭೀರವಾಗಿ ಗಾಯಗೊಂಡಿರುವ ದುರ್ಘಟನೆ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಕ್ರೆ ಎಂಬಲ್ಲಿ ನಿನ್ನೆ ಸಂಭವಿಸಿದೆ.
ಮೂಲತಃ ಶಿವಮೊಗ್ಗ ಜಿಲ್ಲೆ ರಿಪ್ಪನ್ ಪೇಟೆ ನಿವಾಸಿ ಸುರೇಶ್ (48 ) ಗಾಯಾಳು ವ್ಯಕ್ತಿಯಾಗಿದ್ದಾರೆ. ಇಲ್ಲಿಯ ಬಂಗ್ಲೆಗುಡ್ಡೆ ನಿವಾಸಿಯಾಗಿದ್ದ ಅವರು ಸರಕಾರಿ ಶಾಲೆಯಲ್ಲಿ ವಾರ್ಡ್ನ್ ಆಗಿರುವ ಪತ್ನಿಗೆ ಹುಡ್ಕೋ ಕಾಲನಿಯಲ್ಲಿ ತಾಲೂಕು ಪಂಚಾಯತ್ ಅಧೀನದ ವಸತಿ ಗೃಹ ಲಭಿಸಿದ್ದರಿಂದ ಕೆಲ ವರ್ಷಗಳಿಂದ ಅಲ್ಲಿಯೇ ವಾಸವಾಗಿದ್ದಾರೆ.
ನಿನ್ನೆ ಮಧ್ಯಾಹ್ನ ಸುರೇಶ್ ತನ್ನ ಬೈಕ್ನಲ್ಲಿ ಪ್ರಯಾಣಿಸುತ್ತಿದ್ದಾಗ ನಕ್ರೆಯಲ್ಲಿ ನಿಯಂತ್ರಣ ತಪ್ಪಿದ ಬೈಕ್ ಪಲ್ಟಿಯಾಗಿ ರಸ್ತೆಗೆಸೆಯಲ್ಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿರುವವರನ್ನು ಕಾರ್ಕಳ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯ ಬಳಿಕ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.