ಮೂಡುಬಿದಿರೆ, ಡಿ.25: ವಿದ್ಯಾರ್ಥಿಗಳು ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಸ್ವಾದಿಸುವ ಗುಣಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳ ಬೇಕು. ಶಿಕ್ಷಣದ ಜೊತೆಗೆ ಇತರ ಚಟುವಟಿಕೆಗಳ ಮೂಲಕ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುತ್ತಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಬಗ್ಗೆ ವಿಶ್ವದ ವಿಶ್ವವಿದ್ಯಾನಿಲ ಯಗಳು ಸಂಶೋಧನೆ ನಡೆಸುವ ಅಗತ್ಯವಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಹೇಳಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನಾಲ್ಕು ದಿನಗಳ ಕಾಲ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ನಡೆಯುವ 22ನೆ ವರ್ಷದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್-2015ಗೆ ಗುರುವಾರ ಸಂಜೆ ಚಾಲನೆ ನೀಡಿ ಅವರು ಮಾತನಾಡಿದರು.
ರಾಜ್ಯ ಯುವಜನ ಸೇವೆ ಮತ್ತು ಮೀನುಗಾರಿಕಾ ಸಚಿವ ಕೆ.ಅಭಯ ಚಂದ್ರ ಜೈನ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಡಾ.ಎಸ್.ಪಿ.ಬಿಗೆ ವಿರಾಸತ್ ಪ್ರಶಸ್ತಿ ಪ್ರದಾನ :
ಹಿನ್ನೆಲೆ ಗಾಯಕ, ಹಾಡುಗಾರ, ನಟ, ಸಂಗೀತ ನಿರ್ದೇಶಕ ಪದ್ಮಶ್ರೀ, ಪದ್ಮಭೂಷಣ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ 22ನೆ ವರ್ಷದ ವಿರಾಸತ್ನ ಉದ್ಘಾಟನಾ ಸಮಾರಂಭದಲ್ಲಿ ಪ್ರತಿಷ್ಠಿತ ’ಆಳ್ವಾಸ್ ವಿರಾಸತ್ 2015’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಪ್ರಶಸ್ತಿಯು ಪ್ರಶಸ್ತಿ ಪತ್ರ, 1,00,000 ರೂ. ಹಾಗೂ ಸ್ಮರಣಿಕೆಯನ್ನೊಳಗೊಂಡಿತ್ತು. ವಿಶೇಷವಾಗಿ ಕರ್ನಾಟಕದ ಹಿರಿಯ ಶಾಸ್ತ್ರೀಯ ಸಂಗೀತ ವಿದ್ವಾಂಸ ಆರ್.ಕೆ.ಪದ್ಮನಾಭ ಶಾಸ್ತ್ರೀಯ ಸಂಗೀತದ ಗೌರವವನ್ನು ಸಮರ್ಪಿಸಿದರು. ನಂತರ ಸತ್ಯನಾರಾಯಣ ಪುಣಿಂಚಿತ್ತಾಯ ಮತ್ತು ಬಳಗದವರಿಂದ ಯಕ್ಷ ಸಂಗೀತ, ಆಳ್ವಾಸ್ ವಿದ್ಯಾರ್ಥಿಗಳಿಂದ ಯಕ್ಷ ನಮನ, ಮಣಿಪುರಿ ಮತ್ತು ಶ್ರೀಲಂಕಾದ ಕಲಾ ಗೌರವ ಹಾಗೂ ಭಾವ ಸಂಗೀತದ ಮೂಲಕ ಎಸ್ಪಿಬಿಗೆ ಅಭಿವಂದನೆ ಸಲ್ಲಿಸಲಾಯಿತು.
ಹೇಮಾವತಿ ವಿ.ಹೆಗ್ಗಡೆ, ಮಾಜಿ ಸಚಿವ ಕೆ.ಅಮರನಾಥ ಶೆಟ್ಟಿ, ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್,ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಕೆ.ಎ. ದಯಾನಂದ, ಕೆನರಾ ಬ್ಯಾಂಕ್ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಕೇಶ್ ಶರ್ಮ, ಕರ್ಣಾಟಕ ಬ್ಯಾಂಕ್ ಲಿಮಿಟೆಡ್ನ ಆಡಳಿತ ನಿರ್ದೇಶಕ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಜಯರಾಮ ಭಟ್, ಹೊಟೇಲ್ ಪೆನಿನ್ಸುಲಾ, ಮುಂಬೈ ಮತ್ತು ಯು.ಎ.ಇಯ ಆಡಳಿತ ನಿರ್ದೇಶಕ ಕರುಣಾಕರ ಆರ್. ಶೆಟ್ಟಿ, ಅದಾನಿ ಸಂಸ್ಥೆಯ ಎಂ.ಡಿ. ರಾಜೇಶ್, ಯುಪಿಸಿಎಲ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ, ಮುಂಬೈನ ಸುರೇಶ್ ಭಂಡಾರಿ, ಹೊಟೇಲ್ ಗೋಲ್ಡ್ ಫಿಂಚ್ನ ಆಡಳಿತ ನಿರ್ದೇಶಕ ಪ್ರಕಾಶ್ ಶೆಟ್ಟಿ, ಶ್ರೀ ಧನಲಕ್ಷ್ಮೀ ಕ್ಯಾಶ್ಯೂ ಎಕ್ಸ್ಪೋರ್ಟ್ಸ್ನ ಆಡಳಿತ ನಿರ್ದೇಶಕ ಕೆ. ಶ್ರೀಪತಿ ಭಟ್, ಜಯಶ್ರೀ ಅಮರನಾಥ ಶೆಟ್ಟಿ, ಮೀನಾಕ್ಷಿ, ಜಯಕರ ಆಳ್ವ, ಬಾಲಕೃಷ್ಣ ಶೆಟ್ಟಿ, ಅಮಿತಾ ಶೆಟ್ಟಿ, ರಾಮಚಂದ್ರ ಶೆಟ್ಟಿ, ಊರ್ಮಿಳಾ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ಮೊದಲ ದಿನದ ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಾಲ್ಕು ವಯಲಿನ್ಗಳ ವಿಶೇಷ ಪ್ಯೂಶನ್ ನಾದಸುರಭಿ ಪ್ರಸ್ತುತಗೊಂಡಿತು. ವಯಲಿನ್ನಲ್ಲಿ ಮೈಸೂರು ನಾಗರಾಜ್, ಡಾ.ಮೈಸೂರು ಮಂಜುನಾಥ್, ವಿದ್ವಾನ್ ಗಣೇಶ್ ಮತ್ತು ವಿದ್ವಾನ್ ಕುಮರೇಶ್ ಚೆನ್ನೈ ಹಾಗೂ ತಬ್ಲಾದಲ್ಲಿ ಪುಣೆಯ ಪಂಡಿತ್ ರಾಮದಾಸ್ ಪಲ್ಸುಲೆ, ವಿಶೇಷ ತಾಳವಾದ್ಯದಲ್ಲಿ ಅರುಣ್ ಕುಮಾರ್ ಹಾಗೂ ಮೃದಂಗದಲ್ಲಿ ಶಂಕರ್ ಸ್ವಾಮಿಯವರ ಪ್ರದರ್ಶನ ಕಲಾರಸಿಕರ ಮನಸೂರೆಗೊಂಡಿತು.
ಎರಡನೆ ಕಾರ್ಯಕ್ರಮವಾಗಿ ಡಾ.ಎಸ್.ಪಿ . ಬಾಲಸುಬ್ರಹ್ಮಣ್ಯಂ ಮತ್ತು ತಂಡದಿಂದ ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಿತು.