ಮೂಡುಬಿದಿರೆ, ಡಿ.26: ಆಳ್ವಾಸ್ ವಿರಾಸತ್ನ ಎರಡನೆ ದಿನವಾದ ಶುಕ್ರವಾರ ಪುತ್ತಿಗೆ ಪದವಿನ ವಿವೇಕಾನಂದ ನಗರದ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ರಾಗ ರಂಗೋಲಿ ಕಾರ್ಯಕ್ರಮ ನಡೆಯಿತು.
ಡಾ.ಕದ್ರಿ ಗೋಪಾಲನಾಥ್ ಸ್ಯಾಕ್ಸೋಫೋನ್ ಮತ್ತು ಪ್ರವೀಣ್ ಗೋಡ್ಖಿಂಡಿ ಕೊಳಲು ವಾದನ ಸಭಿಕರ ಮನಸೂರೆಗೊಂಡಿತು. ಘಟಂನಲ್ಲಿ ವಿಕ್ಕು ವಿನಾಯಕರಾವ್, ತವಿಲ್ನಲ್ಲಿ ತಂಜಾವೂರು ಗೋವಿಂದರಾಜನ್, ತಬ್ಲಾದಲ್ಲಿ ವಿಜಯ ಘಾಟೆ, ಕಂಜೀರದಲ್ಲಿ ಸೆಲ್ವ ಗಣೇಶ್, ಜಂಬೆಯಲ್ಲಿ ತೌಫಿಕ್ ಖುರೇಶಿ ಮತ್ತು ಕೀಬೋರ್ಡ್ ನಲ್ಲಿ ವಿ.ಉಮೇಶ್ ರಾಗ ರಂಗೋಲಿಯ ಕಾರ್ಯ ಕ್ರಮದಲ್ಲಿ ಸಾಥ್ ನೀಡಿದರು.
ನಂತರ ಮುಂಬೈನ ಉಸ್ತಾದ್ ಮುನಾವರ್ ಮಾಸುಮ್ ಮತ್ತು ಬಳಗದಿಂದ ಕವ್ವಾಲಿ ಮತ್ತು ಸೂಫಿ ಹಾಡುಗಳು ಪ್ರಸ್ತುತಗೊಂಡವು. ಇದಕ್ಕೂ ಮೊದಲು ಮುಂಬೈ ಬಂಟ್ಸ್ ಸಂಘದ ಅಧ್ಯಕ್ಷ ಕರ್ನಿರೆ ವಿಶ್ವನಾಥ ರೈ ಮತ್ತು ಬೆಳ್ತಂಗಡಿಯ ರಮಾನಂದ ಸಾಲ್ಯಾನ್ ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.