ಮಂಗಳೂರು, ಡಿ.27: ರಾಜ್ಯ ವಿಧಾನ ಪರಿಷತ್ ಚುನಾವಣೆ ಮತದಾನ ಪ್ರಕ್ರಿಕೆಯೆ ಇಂದು ಬೆಳಿಗ್ಗಿನಿಂದ ಆರಂಭವಾಗಿದ್ದು, ರಾಜ್ಯ ವಿಧಾನ ಪರಿಷತ್ಗೆ ಸ್ಥಳೀಯ ಪ್ರಾಧಿಕಾರ ಚುನಾವಣಾ ಕ್ಷೇತ್ರದಿಂದ ನಡೆಯಲಿರುವ ಚುನಾವಣೆಯಲ್ಲಿ ಉಡುಪಿ ಜಿಲ್ಲೆಯನ್ನು ಒಳಗೊಂಡ ದ.ಕ. ಕ್ಷೇತ್ರ ಪ್ರತಿಷ್ಠೆಯ ಕಣವಾಗಿ ಪರಿಣಮಿಸಿದೆ.
ಅಂತಿಮವಾಗಿ ಕಣದಲ್ಲಿರುವ 8 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಕ್ಕೆ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ ಜನಪ್ರತಿನಿಧಿಗಳು ಸೇರಿದಂತೆ ಮತದಾರರು ರವಿವಾರ ಬೆಳಗ್ಗೆ ಮತದಾನ ಮಾಡಿದರು.
ಇಂದು ಬೆಳಗ್ಗೆ 8ರಿಂದ ಆರಂಭಗೊಂಡಿರುವ ಮತದಾನ ಸಂಜೆ 4ರ ವರೆಗೆ ನಡೆಯಲಿದೆ, ಇದಕ್ಕಾಗಿ ಗ್ರಾಮ/ತಾಲೂಕು/ಜಿಲ್ಲಾ ಪಂಚಾಯತ್ ಕಚೇರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಒಟ್ಟು 410 ಮತಗಟ್ಟೆಗಳನ್ನು ಅಳವಡಿಸಲಾಗಿದೆ. 500ಕ್ಕೂ ಅಧಿಕ ಸಿಬ್ಬಂದಿ ಚುನಾವಣಾ ಕಾರ್ಯಗಳಲ್ಲಿ ಭಾಗವಹಿಸಿದ್ದಾರೆ.
ದ.ಕ., ಉಡುಪಿ ಸೇರಿದಂತೆ ಒಟ್ಟು 6,558 ಮತದಾರರು ಕಣದಲ್ಲಿರುವ 8 ಮಂದಿ ಅಭ್ಯರ್ಥಿಗಳ ಭವಿಷ್ಯ ನಿರ್ಧಾರಿಸಲಿದ್ದಾರೆ. ಜಿಲ್ಲೆಯಲ್ಲಿ ಸಾಧಾರಣ, ಸೂಕ್ಷ್ಮ ಹಾಗೂ ಅತಿ ಸೂಕ್ಷ್ಮ ಮತಗಟ್ಟೆಗಳಿದ್ದು, ಎಲ್ಲಾ ಮತಗಟ್ಟೆಗಳಲ್ಲೂ ಮೈಕ್ರೋ ಅಬ್ಸರ್ವರ್ ಗಳನ್ನು ನೇಮಕ ಮಾಡಲಾಗಿದೆ. ಎಲ್ಲಾ ಕಡೆಗಳಲ್ಲೂ ವೀಡಿಯೊಗ್ರಾಫಿ ನಡೆಸಲಾಗುತ್ತಿದೆ.
ಕಾಂಗ್ರೆಸ್ನಿಂದ ಕೆ.ಪ್ರತಾಪ್ಚಂದ್ರ ಶೆಟ್ಟಿ, ಬಿಜೆಪಿಯಿಂದ ಕೋಟ ಶ್ರೀನಿವಾಸ ಪೂಜಾರಿ, ಜೆಡಿಎಸ್ನಿಂದ ಎಸ್.ಪ್ರಕಾಶ್ ಶೆಟ್ಟಿ, ಪ್ರವೀಣ್ಚಂದ್ರ ಜೈನ್, ಪಕ್ಷೇತರ ಅಭ್ಯರ್ಥಿಗಳಾಗಿ ಕೆ.ಜಯಪ್ರಕಾಶ್ ಹೆಗ್ಡೆ, ಹರಿಕೃಷ್ಣ ಬಂಟ್ವಾಳ, ಅಲ್ಫೋನ್ಸ್ ಫ್ರಾಂಕೊ, ಇಸ್ಮಾಯೀಲ್ ದೊಡ್ಡಮನೆ ಸ್ಪರ್ಧಾ ಕಣದಲ್ಲಿದ್ದಾರೆ. ಜಯಪ್ರಕಾಶ್ ಹೆಗ್ಡೆ ಮತ್ತು ಹರಿಕೃಷ್ಣ ಬಂಟ್ವಾಳ ಕಾಂಗ್ರೆಸ್ನ ಬಂಡಾಯ ಅಭ್ಯರ್ಥಿಗಳಾಗಿದ್ದು, ಎಸ್ಡಿಪಿಐ ಬೆಂಬಲಿತ ಅಭ್ಯರ್ಥಿಯಾಗಿ ಅಲ್ಫೋನ್ಸ್ ಫ್ರಾಂಕೊ ಕಣದಲ್ಲಿದ್ದಾರೆ.
ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಇಸ್ಮಾಯೀಲ್ ದೊಡ್ಡಮನೆ ಶುಕ್ರವಾರದಂದು ಪತ್ರಿಕಾಗೋಷ್ಠಿ ನಡೆಸಿ, ಕಣದಲ್ಲಿದ್ದರೂ ಸ್ಪರ್ಧೆಯಿಂದ ಹಿಂದೆ ಸರಿದು ಕಾಂಗ್ರೆಸ್ನ ಅಧಿಕೃತ ಅಭ್ಯರ್ಥಿ ಪ್ರತಾಪ್ ಚಂದ್ರ ಶೆಟ್ಟಿಯವರಿಗೆ ಬೆಂಬಲ ನೀಡುವುದಾಗಿ ಹೇಳಿದ್ದರು.
ಆ ಹಿನ್ನೆಲೆಯಲ್ಲಿ 7 ಅಭ್ಯರ್ಥಿಗಳ ನಡುವೆ ಸ್ಪರ್ಧೆ ನಡೆಯಲಿದ್ದು, ಪ್ರಥಮ ಪ್ರಾಶಸ್ತ್ಯದ ಮತದ ಮೇಲೆ ಗೆಲುವಿನ ಲೆಕ್ಕಾಚಾರ ನಡೆಯಲಿದೆ. ಮತಪತ್ರದಲ್ಲಿ ಯಾವುದೇ ಪಕ್ಷದ ಚಿಹ್ನೆ ಇರುವುದಿಲ್ಲ, ಬದಲಾಗಿ ಪಕ್ಷದ ಹೆಸರು, ಅಭ್ಯರ್ಥಿಯ ಭಾವಚಿತ್ರ ಹಾಗೂ ಹೆಸರನ್ನು ನಮೂದಿಸಲಾಗಿರುತ್ತದೆ.
ಒಬ್ಬ ಮತದಾರ ಕಣದಲ್ಲಿರುವ ಎಂಟು ಮಂದಿ ಅಭ್ಯರ್ಥಿಗಳು ಹಾಗೂ ನೋಟಾ (ಮೇಲಿನ ಯಾರೂ ಅಲ್ಲ)ಕ್ಕೂ ಮತ ಚಲಾಯಿಸಲು ಮತಪತ್ರದಲ್ಲಿ ಅವಕಾಶವಿರುತ್ತದೆ. ಆದರೆ ಮತಪತ್ರದಲ್ಲಿ ಪ್ರಥಮ ಪ್ರಾಶಸ್ತ್ಯದ ಮತ ಚಲಾವಣೆ ಆಗಿದ್ದಲ್ಲಿ ಮಾತ್ರವೇ ಮತಪತ್ರ ಸಿಂಧುಗೊಳ್ಳಲಿದೆ.
ಜನಪ್ರತಿನಿಧಿಗಳಿಂದ ಮತದಾನ :
ಸಚಿವರಾದ ರಮಾನಾಥ ರೈ ಬಂಟ್ವಾಳ ತಾಲೂಕು ಪಂಚಾಯತ್ನಲ್ಲಿ, ಯು.ಟಿ.ಖಾದರ್ ಮಂಗಳೂರು ತಾಲೂಕು ಪಂಚಾಯತ್ನಲ್ಲಿ, ಅಭಯಚಂದ್ರ ಜೈನ್ ಮೂಡಬಿದ್ರೆ ಪುರಸಭೆಯಲ್ಲಿ, ವಿನಯ ಕುಮಾರ್ ಸೊರಕೆ ಉಡುಪಿ ನಗರ ಸಭೆಯಲ್ಲಿ, ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಜೆ.ಆರ್.ಲೋಬೋ, ಮೋಯ್ದಿನ್ ಬಾವ, ಐವನ್ ಡಿಸೋಜಾ ಮಂಗಳೂರು ಮಹಾನಗರ ಪಾಲಿಕೆಯಲ್ಲಿ, ಸಂಸದೆ ಶೋಭಾ ಕರಂದ್ಲಾಜೆ ಚಿಕ್ಕಮಗಳೂರಿನಲ್ಲಿ, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್, ಶಾಸಕರಾದ ಪ್ರಮೋದ್ ಮಧ್ವರಾಜ್ ಉಡುಪಿ ನಗರ ಸಭೆಯಲ್ಲಿ, ಶಾಸಕ ಸುನೀಲ್ ಕುಮಾರ್ ಕಾರ್ಕಳ ಪುರಸಭೆಯಲ್ಲಿ, ಕೋಟಾ ಶ್ರೀನಿವಾಸ್ ಪೂಜಾರು ಸಾಲಿಗ್ರಾಮ ಪ.ಪಂಚಾಯತ್ನಲ್ಲಿ, ಪ್ರತಾಪ್ ಚಂದ್ರ ಶೆಟ್ಟಿ, ಕುಂದಾಪುರ ತಾಲೂಕು ಪಂಚಾಯತ್ನಲ್ಲಿ ಮತದಾನ ಮಾಡಿದರು.
ಡಿ.30ರಂದು ಮತ ಎಣಿಕೆ :
ಡಿ.30ರಂದು ಫಲಿತಾಂಶ ಮತ ಎಣಿಕೆಯು ಡಿ.30ರಂದು ಲೇಡಿಹಿಲ್ ವಿಕ್ಟೋರಿಯಾ ಬಾಲಿಕೆಯರ ಸಂಯುಕ್ತ ಪ.ಪೂ. ಕಾಲೇಜಿನಲ್ಲಿ ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳಲಿದೆ.