ಸುರತ್ಕಲ್, ಡಿ.31: ಹೈದರಾಬಾದ್ನ ಸರಳಪಳ್ಳಿ ಎಂಬಲ್ಲಿ ಕ್ಷುಲ್ಲಕ ಕಾರಣಕ್ಕೆ ಕೊಲೆಯಾದ ಅನಿಲ ಸಾಗಾಟದ ಟ್ಯಾಂಕರ್ ಚಾಲಕ ತಮಿಳುನಾಡು ಮೂಲದ ಸರವಣನ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಲು ಒತ್ತಾಯಿಸಿ ಸಿಐಟಿಯು ಹಾಗೂ ಡಿವೈಎಫ್ಐ ನೇತೃತ್ವ ದಲ್ಲಿ ಅನಿಲ ಟ್ಯಾಂಕರ್ ಚಾಲಕ ನಿರ್ವಾಹಕರು ಬೃಹತ್ ಜಾಥಾ ನಡೆಸಿ ಎಚ್ಪಿಸಿಎಲ್ ಕಂಪೆನಿ ಎದುರು ಧರಣಿ ನಡೆಸಿದರು.
ಧರಣಿ ನಿರತರನ್ನು ಉದ್ದೇಶಿಸಿ ಮಾತನಾಡಿದ ಹಮಾಲಿ ಶ್ರಮಿಕರ ಸಂಘದ ಅಧ್ಯಕ್ಷ ವಿಲ್ಲಿ ವಿಲ್ಸನ್, ಕ್ಷುಲ್ಲಕ ಕಾರಣಕ್ಕೆ ಸರವಣನ್ ಹಾಗೂ ಜೊತೆಗಿದ್ದ ನಿರ್ವಾಹಕನಿಗೆ ವೃತ್ತಿಯಲ್ಲಿದ್ದ ಸಮಯದಲ್ಲೇ ಹಲ್ಲೆ ನಡೆಸಿದ್ದು, ಸರವಣನ್ರನ್ನು ಕೊಲೆ ಮಾಡಲಾಗಿದೆ. ಆದರೆ ಈ ಬಗ್ಗೆ ಕಂಪೆನಿ ಅಥವಾ ಮಾಲಕರ ಸಂಘ ಮೌನಕ್ಕೆ ಶರಣಾಗುವ ಮೂಲಕ ಕಾರ್ಮಿಕರ ಜೀವಕ್ಕೆ ಬೆಲೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಳಿಕ ಮಾತನಾಡಿದ ಡಿವೈಎಫ್ಐ ಜಿಲ್ಲಾ ಉಪಾಧ್ಯಕ್ಷ ಇಮ್ತಿಯಾಝ್, ಅನಿಲ ತುಂಬಿಸುವ ಪ್ರದೇಶದಲ್ಲಿ ಟ್ಯಾಂಕರ್ ಚಾಲಕ ನಿರ್ವಾಹಕರಿಗೆ ರಕ್ಷಣೆ ಇಲ್ಲ ದಂತಾಗಿದೆ. ಸರವಣನ್ ಕುಟುಂಬಕ್ಕೆ ಪರಿಹಾರ ಒದಗಿಸಲು ಆಗ್ರಹಿಸಿ ನಿನ್ನೆಯಿಂದ ಧರಣಿ ನಡೆಸುತ್ತಿದ್ದರೂ ಕಂಪೆನಿ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ನಮ್ಮ ಬೇಡಿಕೆಗಳು ಈಡೇರುವವರೆಗೆ ಧರಣಿ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.
ಧರಣಿಗೂ ಮುನ್ನ ಕಾನದ ಡಿವೈಎಫ್ಐ ಕಚೇರಿಯಿಂದ ಭಾರಿ ಸಂಖ್ಯೆಯಲ್ಲಿದ್ದ ಟ್ಯಾಂಕರ್ ಚಾಲಕ-ನಿರ್ವಾಹಕರು ಮೆರವಣಿಗೆ ಮೂಲಕ ಸಾಗಿ ಎಚ್ಪಿಸಿಎಲ್ ಕಂಪೆನಿಯೆದುರು ಧರಣಿ ನಡಸಿದರು. ಸಿಐಟಿಯು ನಗರಾಧ್ಯಕ್ಷೆ ಜಯಂತಿ ಬಿ. ಶೆಟ್ಟಿ, ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಜಯಂತ್ ನಾಯಕ್, ಸಿಐಟಿಯು ರಾಜ್ಯ ಉಪಾ ಧ್ಯಕ್ಷ ಬಾಲಕೃಷ್ಣ, ಡಿವೈಎಫ್ಐನ ಮುಖಂಡರು, ಅನಿಲ ಟ್ಯಾಂಕರ್ಗಳ ಚಾಲಕ-ನಿರ್ವಾಹಕರು ಧರಣಿಯಲ್ಲಿ ಭಾಗವಹಿಸಿದ್ದರು.