ಕೊಣಾಜೆ, ಡಿ.31: ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ, ಶಿಕ್ಷಣ ಸಂಪನ್ಮೂಲ ಕೇಂದ್ರ ಮಂಗಳೂರು, ಮಂಗಳಾ ಗ್ರಾಮೀಣ ಯುವಕ ಸಂಘ ಕೊಣಾಜೆ ಹಾಗೂ ಇತರ ಸಹ ಸಂಘಟನೆಗಳ ಆಶ್ರಯದಲ್ಲಿ ಕೊಣಾಜೆ ಪದವು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ‘ಫೋಕ್ಸೊ ಕಾಯ್ದೆ ಮತ್ತು ಕೌಟುಂಬಿಕ ಹಿಂಸೆ ತಡೆ ಕಾಯ್ದೆ’ಯ ಬಗ್ಗೆ ಮಾಹಿತಿ ಕಾರ್ಯಕ್ರಮ ನಡೆಯಿತು.
ಪ್ರತಿಷ್ಠಾನದ ನಿರ್ದೇಶಕ ಪ್ರಸಾದ್ ರೈ ಕಲ್ಲಿಮಾರ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪ್ರತಿಷ್ಠಾನದ ಕಾರ್ಯದರ್ಶಿ ಅಚ್ಯುತ ಗಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಮಂಗಳಾ ಸೇವಾ ಟ್ರಸ್ಟ್ನ ನಿರ್ದೇಶಕ ಅಬ್ದುನ್ನಾಸಿರ್ ಕೆ.ಕೆ, ಶಿಕ್ಷಣ ಸಂಪನ್ಮೂಲ ಕೇಂದ್ರದ ಅಧ್ಯಕ್ಷ ಆಶಾಲತಾ ಸುವರ್ಣ, ಕೊಣಾಜೆ ಗ್ರಾಪಂ ಸದಸ್ಯೆಯರಾದ ಪದ್ಮಾವತಿ, ವೇದಾವತಿ ಗಟ್ಟಿ, ಮುತ್ತು ಶೆಟ್ಟಿ, ನಿವೃತ್ತ ಮುಖ್ಯ ಶಿಕ್ಷಕ ಹಸನ್ ಸಾಹೇಬ್, ಶಿಕ್ಷಣ ಸಂಪನ್ಮೂಲ ಕೇಂದ್ರದ ಸಂಪನ್ಮೂಲ ವ್ಯಕ್ತಿ ಕಮಲಾ ಗೌಡ, ವೈಎಫ್ಸಿ ಕೊಣಾಜೆ ಇದರ ಕಾರ್ಯದರ್ಶಿ ರಿಯಾಝ್ ಉಪಸ್ಥಿತರಿದ್ದರು.
ಶಾಲಾ ದೈಹಿಕ ಶಿಕ್ಷಕ ರಾಜೀವ ನಾಯಕ್ ಕಾರ್ಯಕ್ರಮ ನಿರೂಪಿಸಿದರು. ಶಾಲಾ ಮುಖ್ಯ ಶಿಕ್ಷಕಿ ಮೀನಾ ಗಾಂವ್ಕರ್ ಸ್ವಾಗತಿಸಿದರು. ಅನ್ನಪೂರ್ಣೇಶ್ವರಿ ವಂದಿಸಿದರು.