ಮಂಗಳೂರು, ಜ.3: ಮಂಗಳೂರು ನಗರ ಪೊಲೀಸ್ ಅಯುಕ್ತರಾಗಿ ನೂತನವಾಗಿ ನೇಮಕಗೊಂಡ ಎಂ.ಚಂದ್ರಶೇಖರ್ ಅವರು ರವಿವಾರ ಬೆಳಿಗ್ಗೆ ಅಧಿಕಾರ ಸ್ವೀಕರಿಸಿದರು. ನಿರ್ಗಮನ ಪೊಲೀಸ್ ಕಮೀಷನರ್ ಎಸ್.ಮುರುಗನ್ ಅವರು ನೂತನ ಪೊಲೀಸ್ ಕಮೀಷನರ್ ಎಂ.ಚಂದ್ರಶೇಖರ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ಚಂದ್ರಶೇಖರ್ ಅವರು ಬೆಂಗಳೂರಿನಲ್ಲಿ ಜಂಟಿ ಪೊಲೀಸ್ ಆಯುಕ್ತರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಮಂಗಳೂರಿನ ಪೊಲೀಸ್ ಕಮೀಷನರ್ ಆಗಿ ನಿಯುಕ್ತಿಗೊಂಡಿದ್ದಾರೆ. ಎಸ್.ಮುರುಗನ್ ಅವರು 2015ರ ಜನವರಿಯಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು. ಇದೀಗ ಮುರುಗನ್ ಬೆಂಗಳೂರಿಗೆ ವರ್ಗಾವಣೆಗೊಂಡಿದ್ದಾರೆ ಎನ್ನಲಾಗಿದೆ.
ಅಧಿಕಾರ ವಹಿಸಿಕೊಂಡ ಬಳಿಕ ಮಾಧ್ಯದೊಂದಿಗೆ ಮಾತನಾಡಿದ ನೂತನ ಪೊಲೀಸ್ ಕಮೀಷನರ್ ಎಂ. ಚಂದ್ರಶೇಖರ್ ಅವರು, ಮಂಗಳೂರು ನಗರದ ಬಗ್ಗೆ ಅಧ್ಯಯನ ಕೈಗೊಂಡು ಪೊಲೀಸ್ ವ್ಯವಸ್ಥೆ ಪ್ರಬಲಗೊಳಿಸಲು ಪ್ರಯತ್ನಿಸಲಾಗುವುದು. ಕಾನೂನು ಶಿಸ್ತು ಪಾಲನೆ ಮುಖ್ಯವಾಗಿಟ್ಟುಕೊಂಡು ಜನಸ್ನೇಹಿ ಪೊಲೀಸ್ ವ್ಯವಸ್ಥೆ ಜ್ಯಾರಿಗೆ ಹೆಚ್ಚು ಒತ್ತುಕೊಡುವುದಾಗಿ ತಿಳಿಸಿದರು.
ಈ ಸಂದರ್ಭ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.