ಕುಂದಾಪುರ: ಕಳೆದ ಎರಡೂವರೆ ವರ್ಷಗಳ ಹಿಂದೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಅವರ ಕಾಂಗ್ರೆಸ್ ಸರಕಾರದಿಂದ ಜನರು ಬೇಸತ್ತಿದ್ದು ಸರಕಾರದ ಬಗ್ಗೆ ಜನರಲ್ಲಿ ಅಕ್ರೋಷ ಮೂಡಿದೆ. ದಪ್ಪ ಚರ್ಮದ ಕಿವಿ ಕೇಳಿಸದ ಸ್ಥಿತಿಯಲ್ಲಿ ಪ್ರಸ್ತುತ ರಾಜ್ಯ ಸರಕಾರ ಕೆಲಸ ಮಾಡುತ್ತಿದೆ ಎಂದು ಚಿಕ್ಕಮಗಳೂರು-ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ನಡೆಸಿದ್ದಾರೆ.
ಸೋಮವಾರ ಕೋಟೇಶ್ವರದಲ್ಲಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಅವರು ರಾಜ್ಯಸರಕಾರದ ವಿರುದ್ದ ವಾಗ್ದಾಳಿ ಮಾಡಿದರು.
ಜಿ.ಪಂ. ತಾ.ಪಂ. ಚುನಾವಣೆಗೆ ಬಿಜೆಪಿ ರೆಡಿ:
ಜಿಲ್ಲಾಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಈ ವಾರಾಂತ್ಯದಲ್ಲಿ ಘೋಷಣೆಯಾಗಿ ಫೆಬ್ರವರಿ ಎರಡನೇ ವಾರದೊಳಗಾಗಿ ಚುನಾವಣೆಯ ಎಲ್ಲಾ ಪ್ರಕ್ರಿಯೆಗಳು ಮುಗಿಯುವ ಸಾಧ್ಯತೆಗಳಿದ್ದು ಈ ಚುನಾವಣೆಗೆ ಬಿಜೆಪಿ ಪಕ್ಷ ಸರ್ವ ಸಿದ್ದತೆಯನ್ನು ಮಾಡಿದೆ. ಜಿಲ್ಲಾ ತಂಡವು ಪ್ರತಿಯೊಂದು ಜಿಲ್ಲಾ ಪಂಚಾಯತ್ ವ್ಯಾಪ್ತಿಗಳಿಗೆ ತೆರಳಿ ಅಲ್ಲಿನ ಕಾರ್ಯಕರ್ತರನ್ನು ಸಂದರ್ಶಿಸಿ ಸ್ಪರ್ಧೆಗೆ ಆಕಾಂಕ್ಷಿಗಳನ್ನು ಭೇಟಿ ಮಾಡಿ ಅವರ ಹೆಸರುಗಳನ್ನು ಪಡೆದು ಸಹಮತದೊಂದಿಗೆ ಜನಬೆಂಬಲ ಇರುವ ಅಭ್ಯರ್ಥಿಯನ್ನು ಆಯ್ಕೆ ಮಾಡಲಿದ್ದೇವೆ. ಈಗಾಗಲೇ ಉಡುಪಿ, ಬೈಂದೂರು, ಕುಂದಾಪುರ ಭಾಗದಲ್ಲಿ ಈ ಪ್ರಕ್ರಿಯೆ ನಡೆದಿದ್ದು ಕಾಪು ಮೊದಲಾದೆಡೆ ಈ ಕೆಲಸ ನಡೆಸಿ ಜ.೬ ರ ಬಳಿಕ ಎಲ್ಲಾ ಕ್ಷೇತ್ರಗಳಿಗೆ ಯೋಗ್ಯ ಅಭ್ಯರ್ಥಿಗಳ ಹೆಸರನ್ನು ಆಯ್ಕೆ ಮಾಡಲಾಗುತ್ತದೆ ಎಂದರು. ಈಗಾಗಲೇ ಆಕಾಂಕ್ಷಿಗಳು ತಮ್ಮ ಹೆಸರನ್ನು ನೀಡುತ್ತಿದ್ದು ಪಟ್ಟಿ ದೊಡ್ಡದಿದೆ, ಸಾಮಾನ್ಯ ಕ್ಷೇತ್ರದಲ್ಲಿ ಸ್ಪರ್ಧಿಸುವ ಸ್ಪರ್ಧಾಕಾಂಕ್ಷಿಗಳು ಜಾಸ್ಥಿಯಿದ್ದು ಇದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಇದು ಶುಭ ಸೂಚಕವಗಿದೆ ಎಂದರು.
ಕೇಂದ್ರ ಸರಕಾರ ರಾಜ್ಯದ ಗ್ರಾಮಪಂಚಾಯತಿಗಳಿಗೆ ನೀಡಿದ ಹಣವನ್ನು ರಾಜ್ಯಸರಜಾರ ವಿದ್ಯುತ್ ಬಿಲ್ಲು ಪಾವತಿಗೆ ಬಳಸುತ್ತಿರುವುದು ಸರಿಯಲ್ಲ ಎಂದು ಆರೋಪಿಸಿದ ಕರಂದ್ಲಾಜೆ ಅವರು, ೨೦೧೫ ನೇ ಸಾಲಿನ ಬಜೆಟಿನ ಹಣ ಎಲ್ಲಿ ಎಷ್ಟೆಷ್ಟು ವ್ಯಯವಾಗಿದೆ ಎಂಬ ಬಗ್ಗೆ ಸರಕಾರ ಶ್ವೇತಪತ್ರ ಹೊರಡಿಸಬೇಕು. ಈ ಬಾರಿ ಬಜೆಟ್ ಹಣದಲ್ಲಿ ಯಾವ ಇಲಾಖೆಯಲ್ಲಿ ಶೇಖಡಾ೨೫ ರಷ್ಟು ಕೆಲಸವಾಗಿಲ್ಲ, ಮುಂದಿನ ಬಾರೀ ಹೀಗಗಬಾರದು ಎಂದು ಆಗ್ರಹಿಸಿದರು.
ವಿಧಾನಪರಿಷತ್ ಚುನಾವಣೆ ಗೆಲುವಿನ ಬಗ್ಗೆ ಕಾಂಗ್ರೆಸ್ ಸರಕಾರ ಹಿಗ್ಗುವ ಆಗತ್ಯವಿಲ್ಲ. ಬಹುತೇಕ ಭಾಗಗಳಲ್ಲಿ ವಿವಿಧ ಆಸೆ-ಆಮೀಷಗಳನ್ನೊಡ್ಡಿ ಈ ಚುನಾವಣೆಯ ಎದುರಿಸಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಮಂಗಳೂರು ವಿಧಾನಪರಿಷತ್ ಕ್ಷೇತ್ರದ ಬಿಜೆಪಿ ಕಾರ್ಯಕರ್ತರು ಈ ಎಲ್ಲಾ ಆಮಿಷಗಳನ್ನು ಮೀರಿ ತಮ್ಮ ತನವನ್ನು ಬಿಟ್ಟುಕೊಡದೇ ಬಿಜೆಪಿ ಅಭ್ಯರ್ಥಿಯನ್ನು ಆರಿಸಿದ ಬಗ್ಗೆಯೂ ಇದೇ ಸಂದರ್ಭ ಕ್ರತಜ್ನತೆ ವ್ಯಕ್ತಪಡಿಸಿದರು.
ಸರಕಾರದ ವಿರುದ್ಧ ವಾಗ್ದಾಳಿ:
ಈಗಾಗಲೆ ಸರಕಾರದ ಎಲ್ಲಾ ಭಾಗ್ಯಗಳು ವಿಫಲವಾಗಿದೆ, ಈಗಾಗಲೇ ಸರಕಾರದ ಜನವಿರೋಧಿ ನೀತಿಗೆ ಜನರು ಬೇಸತ್ತು ಹೋಗಿದ್ದಾರೆ. ಸರಕಾರ ಜನರ ಯವುದೇ ಸಮಸ್ಯೆಗಳಿಗೆ ಸ್ಪಂದನೆ ನೀಡದೇ ತನ್ನದೇ ಧೋರಣೆ ಅನುಸರಿಸುತ್ತಿದೆ, ಇದೆಲ್ಲವೂ ಜಿ.ಪಂ. ಹಾಗೂ ತಾ.ಪಂ. ಚುನಾವಣೆ ಮೇಲೆ ಪ್ರಭಾವ ಬೀರಲಿದ್ದು ಜನರೇ ಕಾಂಗ್ರೆಸಿಗೆ ತಕ್ಕ ಪಾಠ ಕಲಿಸಲಿದ್ದಾರೆ, ಈ ಮೂಲಕವಾಗಿ ನಿದ್ದೆಯಲ್ಲಿರುವ ರಾಜ್ಯ ಸರಕಾರವನ್ನು ಎಚ್ಚರಿಸುವ ಕೆಲಸ ಮಾಡುತ್ತಾರೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ್ ಪೂಜಾರಿ, ಬಿಜೆಪಿ ಜಿಲ್ಲಾಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ, ಉಪಾಧ್ಯಕ್ಷ ಕಿರಣ್ ಕೊಡ್ಗಿ, ಕುಂದಾಪುರ ಬಿಜೆಪಿ ಅಧ್ಯಕ್ಷ ರಾಜೇಶ್ ಕಾವೇರಿ, ಮೀನುಗಾರಿಕಾ ಪ್ರಕೋಷ್ಟದ ರಾಜ್ಯ ಸಂಚಾಲಕ ಬಿ.ಕಿಶೋರ್ ಕುಮಾರ್, ಯುವಮೋರ್ಚಾ ಅಧ್ಯಕ್ಷ ಶಂಕರ ಅಂಕದಕಟ್ಟೆ, ಜಿಲ್ಲಾ ಯುವಮೋರ್ಚಾದ ಮಹೇಶ್ ಪೂಜಾರಿ, ಮುಖಂಡರಾದ ರವೀಂದ್ರ ದೊಡ್ಮನೆ ಮೊದಲಾದವರಿದ್ದರು.
ವರದಿ- ಯೋಗೀಶ್ ಕುಂಭಾಸಿ