ಮಂಗಳೂರು.ಜ.08: ಸುರತ್ಕಲ್ ಪ್ರದೇಶದಲ್ಲಿ ತ್ಯಾಜ್ಯ ನೀರಿನ ಸೂಕ್ತ ರೀತಿಯ ನಿರ್ವಹಣೆಗಾಗಿ ನೂತನ ಒಳಚರಂಡಿ ಶುದ್ಧೀಕರಣ ಘಟಕ (ಎಸ್ ಟಿ ಪಿ)ವನ್ನು ಸ್ಥಾಪಿಸಲಾಗಿದ್ದು, ಜ.11ರಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಅವರು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ಶಾಸಕ ಮೊಯ್ದಿನ್ ಬಾವಾ ರಬರು ತಿಳಿಸಿದ್ದಾರೆ.
ಅವರು ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ತ್ಯಾಜ್ಯ ನಿರ್ವಹಣೆಯ ಘಟಕ ಸ್ಥಾಪಿಸುವಬೇಕು ಎನ್ನುವ ಕನಸು ಈಗ ನನಸಾಗುತ್ತಿದೆ. ಪರಿಸರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಸುರತ್ಕಲ್, ಕಾವೂರು, ವಾಮಂಜೂರು ಭಾಗದಲ್ಲಿ ಇದರ ಅಭಿವೃದ್ಧಿ ಹಾಗೂ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಆರೋಗ್ಯ ಸಚಿವ ಯು.ಟಿ. ಖಾದರ್, ಯುವಜನ ಅಭಿವೃದ್ಧಿ ಖಾತೆ ಸಚಿವ ಅಭಯಚಂದ್ರ ಜೈನ್, ಸಂಸದ ನಳಿನ್ ಕುಮಾರ್ ಕಟೀಲ್, ರಾಜ್ಯ ಸಭಾ ಸದಸ್ಯ ಆಸ್ಕರ್ ಫೆರ್ನಾಂಡೀಸ್, ಮಾಜಿ ಕೇಂದ್ರ ಸಚಿವ ವೀರಪ್ಪ ಮೊಯ್ಲಿ ಹಾಗೂ ರಾಜ್ಯದ ಹಲವು ಐ ಎ ಎಸ್ ಗ್ರೇಡ್ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ವಿವಿಧ ಕಾಮಗಾರಿಯ ಶಿಲಾನ್ಯಾಸ: ಇದೇ ದಿನ ವಾಮಂಜೂರಿನ ಕುಟ್ಟಿಪಳ್ಕೆಯಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವ ರಸ್ತೆಯ ಶಿಲಾನ್ಯಾಸ, ಕಾವೂರು ಬಳಿ ಸುಮಾರು 75 ಲಕ್ಷ ರೂ. ವೆಚ್ಚದ ರಸ್ತೆಯ ಶಿಲಾನ್ಯಾಸ ಹಾಗೂ ಪರಾರಿಯಿಂದ ಉಳಾಯಿಬೆಟ್ಟು ಬಳಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಕಾಂಕ್ರಿಟ್ ರಸ್ತೆಯ ಶಂಕುಸ್ಥಾಪನೆಯನ್ನು ಸಚಿವ ವಿನಯ ಕುಮಾರ್ ಸೊರಕೆ ನೆರವೇರಿಸುವರು.
ಲಕ್ಷ ರೂ. ಅನುದಾನ:ಬೈಕಂಪಾಡಿಯಿಂದ ಕೂಳೂರುವರೆಗೆ ಬೀದಿ ದೀಪ ಅಳವಡಿಸಲು ಎನ್ ಎಂ ಪಿ ಟಿ ಸುಮಾರು 90 ಲಕ್ಷ ರೂ. ಅನುದಾನ ನೀಡಿದೆ. ಈ ನಿಟ್ಟಿನಲ್ಲಿ ಬೀದಿ ದೀಪ ಅಳವಡಿಕೆಗೆ ಮಂತ್ರಿಗಳು ಹಾಗೂ ಅಧಿಕಾರಿಗಳು ಚಾಲನೆ ನೀಡಲಿದ್ದಾರೆ ಎಂದರು
ಹಿಂದುಳಿದ ಮಕ್ಕಳಿಗೆ ವಸತಿ ಕೇಂದ್ರ: ಜಿಲ್ಲೆಯ ಹಿಂದುಳಿದ ವರ್ಗದ ಮಕ್ಕಳಿಗಾಗಿ ವಸತಿ ಕೇಂದ್ರ ನಿರ್ಮಿಸಲು 2 ಕೋಟಿ ರೂ.ಅನುದಾನ ದೊರಕಿದೆ. ಸುಂಕದಕಟ್ಟೆ ಸ್ವಾಮೀಜಿ ನೀಡಿದ 30 ಸೆಂಟ್ಸ್ ಜಾಗದಲ್ಲಿ ಈ ವಸತಿ ಕೇಂದ್ರ ನಿರ್ಮಾಣವಾಗಲಿದ್ದು, ಎಪ್ರಿಲ್ ಮೇ ಶೀಘ್ರದಲ್ಲಿ ಶಿಲಾನ್ಯಾಸ ನಡೆಯಲಿದೆ ಎಂದು ಶಾಸಕರು ತಿಳಿಸಿದರು.