ಬಂಟ್ವಾಳ, ಜ.08: 16ರ ಹರೆಯದ ವಿದ್ಯಾರ್ಥಿಯೋರ್ವ ತನ್ನ ಹಾಸ್ಟೆಲ್ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗ್ಗೆ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಸಂಭವಿಸಿದೆ.
ವಗ್ಗ ನಿವಾಸಿ ದಿ. ದೇವಣ್ಣ ನಾಯಕ್-ಶ್ಯಾಮಲಾ ಪ್ರಭು ದಂಪತಿಯ ಪುತ್ರ ದೀಷಕ್ (16) ಮೃತ ಬಾಲಕನಾಗಿದ್ದು ವಗ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ 10ನೇ ತರಗತಿಯ ವಿದ್ಯಾರ್ಥಿಯಾಗಿದ್ದ. ಹತ್ತಿರವೇ ಈತನ ಅಜ್ಜ ನಿವೃತ್ತ ಶಿಕ್ಷಕ ಗೋಪಾಲಕೃಷ್ಣ ನಾಯಕ್ ಅವರ ಮನೆಯಿದೆ.
ಶಾಲೆಯ ಹಾಸ್ಟೆಲ್ನಲ್ಲಿ ವಾಸವಾಗಿದ್ದ ದೀಷಕ್ ಇಂದು ಬೆಳಗ್ಗೆ 9.30ರ ಸುಮಾರಿಗೆ ಹಾಸ್ಟೆಲ್ನಲ್ಲಿರುವ ಇತರ ವಿದ್ಯಾರ್ಥಿಗಳೊಂದಿಗೆ ತಿಂಡಿ ತಿನ್ನಲು ಮೇಲಂತಸ್ತಿಗೆ ತೆರಳಿದ್ದು, ಅಲ್ಲಿಂದ ವಾಪಸ್ ತನ್ನ ಕೊಠಡಿಗೆ ಬಂದವನು ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ದೀಪಕ್ನ ತಂದೆ ದೇವಣ್ಣ ನಾಯಕ್ ಅವರು ಹಿಂದೆ ವಗ್ಗದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು, ಕೆಲ ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಾಯಿ ಶ್ಯಾಮಲಾ ಪ್ರಭು ಅವರು ಅಂಗವಿಕಲೆಯಾಗಿದ್ದು, ಎರಡೂ ಕಣ್ಣುಗಳು ಕಾಣಿಸುತ್ತಿಲ್ಲ. ಈ ದಂಪತಿಯ ಹಿರಿಯ ಪುತ್ರ ದೀಷಕ್ ಕಲ್ಲಡ್ಕದ ಶ್ರೀರಾಮ ವಿದ್ಯಾಲಯದಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆಯುತ್ತಿದ್ದಾನೆ.
ಎರಡನೇ ತರಗತಿಯವರೆಗೆ ವಗ್ಗದ ಅಲಂಪುರಿ ಹಿರಿಯ ಪ್ರಾಥಮಿಕ ಶಾಳೆಯ ವಿದ್ಯಾರ್ಥಿಯಾಗಿದ್ದು, ದೀಷಕ್ ಬಳಿಕ ಮಾವನ ಜೊತೆಗೆ ಮುಂಬೈಗೆ ತೆರಳಿ ಅಲ್ಲಿ ಐದನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದು, ಆರನೇ ತರಗತಿಗೆ ವಗ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆಯನ್ನು ಸೇರಿದ್ದ.
ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ತರಗತಿಯಲ್ಲಿ ಮೊದಲನೆಯವನಾಗಿದ್ದು, ದೀಷಕ್ ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಗೂ ಪಾತ್ರನಾಗಿದ್ದ