ಮ೦ಗಳೂರು ಜ.08 :ದೇಶದಲ್ಲಿ ದ.ಕ ಜಿಲ್ಲೆಯನ್ನು ಸಂಪೂರ್ಣ ಸೌರಶಕ್ತಿ ಜಿಲ್ಲೆಯನ್ನಾಗಿಸುವ ದಿಕ್ಕಿನಲ್ಲಿ ಪುತ್ತೂರು ತಾಲೂಕಿನ ಪೆರಾಜೆ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವಾಗಿಸಲು ರೂ.1,44,64000/- ಕ್ರಿಯಾಯೋಜನೆಯನ್ನು ಪೆರಾಜೆ ಸೌರದೀಪ ಅನುಷ್ಠಾನ ಸಮಿತಿಯು ತಯಾರಿಸಿ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಧಿಕಾರಿ ಪಿ.ಐ. ಶ್ರೀ ವಿದ್ಯಾರವರಿಗೆ ಸಲ್ಲಿಸಿದ್ದಾರೆ.
ಶುಕ್ರವಾರ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಈ ಸಂಬಂಧ ನಡೆದ ಸಭೆಯಲ್ಲಿ ಪೆರಾಜೆ ಸೌರದೀಪ ಅನುಷ್ಠಾನ ಸಮಿತಿಯ ಅಧ್ಯಕ್ಷರಾದ ಯಮುನಾ ಎಸ್.ರೈ ಮತ್ತು ಜನಶಿಕ್ಷಣ ಟ್ರಸ್ಟ್ನ ಶೀನಾ ಶೆಟ್ಟಿ ಹಾಗೂ ಕೃಷ್ಣ ಮೂಲ್ಯ ಅವರು ಈ ಬಗ್ಗೆ ಸಭೆಗೆ ಮಾಹಿತಿ ನೀಡಿದರು.
ಪೆರಾಜೆ ಗ್ರಾಮವನ್ನು ಸಂಪೂರ್ಣ ಸೌರಶಕ್ತಿ ಗ್ರಾಮವನ್ನಾಗಿ ಮಾರ್ಚ್ 15 ರೊಳಗೆ ಪರಿವರ್ತಿಸುವಂತೆ ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ರವರು ಸಂಬಂಧಿಸಿದವರಿಗೆ ಸೂಚಿಸಿದರು.
ವಿದ್ಯುತ್ ಸಂಪರ್ಕವಿಲ್ಲದ 35 ಮನೆಗಳಿಗೆ ತಲಾ 10,000ರೂ ಗಳಲ್ಲಿ ಪ್ರತಿ ಮನಗೆ 2ಎಲ್ಇಡಿ ಬಲ್ಬಗಳನ್ನು ಅಳವಡಿಕೆಗೆ ರೂ. 3.50 ಲಕ್ಷ 740 ಬಿಪಿಎಲ್ ಕುಟುಂಬಗಳಿಗೆ ರೂ. 74ಲಕ್ಷ ವೆಚ್ಚದಲ್ಲಿ ತಲಾ 2 ಎಲ್ಇಡಿ ಬಲ್ಬ್ಗಳು ಅಂತ್ಯೋದಯ ಪಡಿತರ ಕಾರ್ಡುದಾರರ 73 ಮನೆಗಳಿಗೆ೪ ತಲಾ 2 ಎಲ್ಇಡಿ ಬಲ್ಬ್ ಗಳನ್ನು ಅಳವಡಿಸಲು ರೂ. 7.30 ಲಕ್ಷ 118 ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮನೆಗಳಿಗೆ ತಲಾ ಮನೆಗೆ 2 ಎಲ್ಇಡಿ ಬಲ್ಬ್ಗಳನ್ನು ರೂ. 11.80 ಲಕ್ಷ, ಎಂಡೋ ಪೀಡಿತರ 40 ಮನೆಗಳಿಗೆ ತಲಾ 2 ಎಲ್ಇಡಿ ಬಲ್ಬ್ ಮತ್ತು 1 ಫ್ಯಾನ್ ಅಳವಡಿಸಲು ರೂ.8.36 ಲಕ್ಷ, 25 ಅಂಗವಿಕಲರ ಮನೆಗಳಿಗೆ 2 ಎಲ್ಇಡಿ ಬಲ್ಬ್ಗಳನ್ನು ಅಳವಡಿಸಲು ರೂ. 2.50 ಲಕ್ಷ, 100 ಬೀದಿ ದೀಪಗಳನ್ನು ಅಳವಡಿಕೆಗೆ ರೂ. 24 ಲಕ್ಷ, ಗ್ರಾಮದ ಗ್ರಂಥಾಲಯ ಕಟ್ಟಡಕ್ಕೆ 1.5 ಕೆ.ವಿ.ಎ. ಇನ್ವರ್ಟರ್ ಅಳವಡಿಸಲು ರೂ. 1.88 ಲಕ್ಷ ಗ್ರಾಮ ಪಂಚಾಯತ್ ಕಟ್ಟಡಕ್ಕೆ 2 ಕೆ.ವಿ.ಎ ಇನ್ವರ್ಟರ್ ಅಳವಡಿಸಲು ರೂ. 2.30 ಲಕ್ಷ ಮಿನಿಗ್ರಿಡ್ ನ್ನು ರೂ. 9. ಲಕ್ಷ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವುದಾಗಿ ಶೀನ ಶೆಟ್ಟಿ ಜಿಲ್ಲಾಧಿಕಾರಿ ಸಭೆಗೆ ತಿಳಿಸಿ ಇದಕ್ಕೆ ದಾನಿಗಳು ದೇಣಿಗೆ ನೀಡುವಂತೆ ವಿನಂತಿಸಿದರು.
ಸಭೆಯಲ್ಲಿ ಹಾಜರಿದ್ದ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿ’ಸೋಜಾ ಅವರು ಎಂಡೋ ಪೀಡಿತರ 40 ಮನೆಗಳಿಗೆ ಸೌರ ಶಕ್ತಿಯ ಎಲ್ಇಡಿ ಬಲ್ಬ್ ಮತ್ತು 1 ಫ್ಯಾನ್ ಅಳವಡಿಕೆಗೆ ರೂ.8.36 ಲಕ್ಷ ಗಳನ್ನು ತಮ್ಮ ಶಾಸಕರ ಅನುದಾನದಿಂದ ನೀಡುವುದಾಗಿ ತಿಳಿಸಿದರು.
ಇದೇ ರೀತಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ವತಿಯಿಂದ ರೂ. 5 ಲಕ್ಷ ನೀಡುವುದಾಗಿ ಸಂಸ್ಥೆಯ ಅಧಿಕಾರಿ ಸಭೆಗೆ ತಿಳಿಸಿದರು.
ಕುಕ್ಕೆ ಸುಬ್ರಮಣ್ಯ ದೇವಸ್ಥಾನದ ವತಿಯಿಂದ ಪೆರಾಜೆ ಗ್ರಾಮಕ್ಕೆ ಸೌರಶಕ್ತಿ ಅಔವಡಿಕೆಗೆ ಅನುದಾನ ನೀಡುವಂತೆ ಪೆರಾಜೆ ಸೌರದೀಪ ಅನುಷ್ಠಾನ ಸಮಿತಿಯವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದು, ಈ ಬಗ್ಗೆ ದೇವಾಲಯ ಸಮಿತಿಗೆ ಮನವಿ ನೀಡಿದಲ್ಲಿ ಸರ್ಕಾರದಿಂದ ಅನುಮೋದನೆ ಪಡೆಯಲು ಯತ್ನಿಸುವುದಾಗಿ ಮುಜರಾಯಿ ಇಲಾಖೆ ತಹಶೀಲ್ದಾರರಾದ ಪ್ರಭಾಕರ್ ಅವರು ಸಭೆಗೆ ಮಾಹಿತಿ ನೀಡಿದರು.
ಇನ್ನುಳಿದಂತೆ ಮೆಸ್ಕಾಂ ವತಿಯಿಂದ ಬೀದಿ ದೀಪಗಳ ಅಳವಡಿಕೆಗೆ ಮಂಡಳಿ ಸಭೆಯಲ್ಲಿ ವಿಷಯ ಚರ್ಚಿಸುವುದಾಗಿ ಮೆಸ್ಕಾಂ ಅಧಿಕಾರಿ ನಂಜಪ್ಪ ತಿಳಿಸಿದರು. ಸಭೆಯಲ್ಲಿ ಎಂಆರ್ಪಿಎಲ್, ನಬಾರ್ಡ್ ಇನ್ನಿತರ ಸಂಸ್ಥೆಗಳ ಅಧಿಕಾರಿಗಳು ಭಾಗವಹಿಸಿದರು.