ಕುಂದಾಪುರ: ಶಂಕರಾಚರ್ಯರು ಸ್ಥಾಪಿಸಿದರೆಂದು ಪ್ರತೀತಿಯುಳ್ಳ ಉಡುಪಿ ಜಿಲ್ಲೆಯ ಕುಂದಾಪುರದ ಪ್ರಸಿದ್ದ ಕಾರಣಿಕ ಕ್ಷೇತ್ರವಾದ ಮಾರಣಕಟ್ಟೆ ಶ್ರೀ ಬ್ರಹ್ಮಲಿಂಗೇಶ್ವರ ದೇವಾಲಯದಲ್ಲಿ ವಾರ್ಷಿಕ ಗೆಂಡಸೇವೆ ಮತ್ತು ಜಾತ್ರ ಮಹೋತ್ಸವ ಗುರುವಾರ ಮಕರ ಸಂಕ್ರಾತಿಯಂದು ವಿಜೃಂಭಣೆಯಿಂದ ನಡೆಯಿತು.
ತುಳುನಾಡಿನ ಅಸಂಕ್ಯ ಭಕ್ತ ಸಮುದಾಯವನ್ನು ಹೊಂದಿರುವ ದೇವಸ್ಥಾನ ಊರ ಮತ್ತು ಪರವೂರ ಅಪಾರ ಭಕ್ತಸಾಗರವನ್ನು ಹೊಂದಿದೆ. ಕ್ಷೇತ್ರದಲ್ಲಿ ಪ್ರತಿನಿತ್ಯ ವಿಶೇಷ ಪೂಜೆಗಳು ನಡೆಯುತ್ತದೆ.ರಂಗಪೂಜೆ, ಮಂಗಳಾರತಿ ಇಲ್ಲಿ ನಡೆಯುವ ವಿಶೇಷ ಪೂಜಾ ಕೈಂಕರ್ಯಗಳು. ಬ್ರಹ್ಮಲಿಂಗೇಶ್ವರ ದೇವರಿಗೆ ಪ್ರಿಯವಾದ ಸೇವಂತಿಗೆ ಮತ್ತು ಶೃಂಗಾರ ಪುಷ್ಪವನ್ನು ಹಬ್ಬದ ದಿನ ಸಾವಿರಾರು ಭಕ್ತರು ಅರ್ಪಿಸಿ ಹರಕೆ ತೀರಿಸಿದರು. ಈ ಸಂಪ್ರದಾಯಕ್ಕೆ ಹೂಕಾಯಿ ಆರ್ಪಿಸುವುದು ಎನ್ನಲಾಗುತ್ತದೆ.
ಬೆಳಿಗ್ಗೆಯಿಂದಲೇ ಆಗಮಿಸುವ ಭಕ್ತ ಸಾಗರ ಹೂ ಕಾಯಿ ಸಮರ್ಪಿಸಲು ದೇವಸ್ಥಾನದಿಂದ ಹಲವು ದೂರದವರೆಗೂ ಸರತಿ ಸಾಲಿನಲ್ಲಿ ಕಾದು ನಿಲ್ಲುತಾರೆ.ತುಳು ನಾಡಿನ ಭಕ್ತರಿಗೆ ಬ್ರಹ್ಮಲಿಂಗೇಶ್ವರ ದೇವರ ಬಗ್ಗೆ ಅಪಾರ ಭಯ ಭಕ್ತಿ ಇದ್ದು ಪ್ರತಿವರ್ಷ ಸಂಕ್ರಮಣದಂದು ಜರಗುವ ಈ ಜಾತ್ರೆಗೆ ಆಗಮಿಸಿ ಪೂಜೆ ಸಲ್ಲಿಸುವುದು ವಾಡಿಕೆ. ಕ್ಷೇತ್ರದಲ್ಲಿ ಬ್ರಹ್ಮಲಿಂಗೇಶ್ವರನು ಪ್ರಧಾನ ದೇವರಾಗಿದ್ದು ಹುಲಿದೆವರು,ಹಾಯ್ಗುಳಿ,ಮರ್ಲ್ ಚಿಕ್ಕು ಮುಂತಾದ ಪರಿವಾರ ದೈವಗಳು ಇಲ್ಲಿ ನೆಲೆಸಿದೆ.ಮಾರಣಕಟ್ಟೆ ಶ್ರೀ ಕ್ಷೇತ್ರವು ಕುಂದಾಪುರದಿಂದ ಕೊಲ್ಲೂರಿಗೆ ಸಾಗುವ ಹೆದ್ದಾರಿಯಲ್ಲಿ ಸಿಗುವ ಚಿತ್ತೂರು ಎಂಬ ಗ್ರಾಮದಿಂದ ಕಾಲ್ನಡಿಗೆಯ ದೂರದಲ್ಲಿ ಸಿಗುತ್ತದೆ.
ಕೆಂಡ ಸೇವೆ: ರಾತ್ರಿ ದೇವಾಲಯದಲ್ಲಿ ನಡೆಯುವ ದರ್ಶನದ ನಂತರ 11.30 ಕ್ಕೆ ಆರಂಭವಾಗುವ ಕೆಂಡಸೆವೆಯಲ್ಲಿ ಸುಮಾರು 5000ಕ್ಕೂ ಅಧಿಕ ಭಕ್ತರು ಪಾಲ್ಗೊಂಡು ತಮ್ಮ ಹರಕೆ ಸಲ್ಲಿಸುವುದು ಕ್ಷೇತ್ರದಲ್ಲಿ ವರ್ಷಂಪ್ರತಿ ನಡೆದು ಬಂದ ಪದ್ಧತಿ. ಶ್ರೀ ಕ್ಷೇತ್ರದಲ್ಲಿ ಮಹಿಳೆಯರು ಪುರುಷರು ಎಂಬ ಭೇದವಿಲ್ಲದೆ ಎಲ್ಲರೂ ಕೆಂಡ ಸೇವೆಯಲ್ಲಿ ಪಾಲ್ಗೊಳ್ಳುವುದು ಮತ್ತೊಂದು ವಿಶೇಷವಾಗಿದೆ.
ಶಿವಾನಿ ಮ್ಯೂಸಿಕಲ್ಸ್ ಆರ್ಕೆಸ್ಟ್ರಾಗೆ ಜನರು ಫಿದಾ: ಸ್ಥಳೀಯರಾದ ಭಾಸ್ಕರ್ ನಾಯ್ಕ್ ಸಂಯೋಜನೆಯಲ್ಲಿ ನಾಗರೀಕರ ಸಹಕಾರದಲ್ಲಿ ಆರ್ಕೆಸ್ಟ್ರಾ ಕಾರ್ಯಕ್ರಮವಿತ್ತು.ನವೀನ್ಚಂದ್ರ ಕೊಪ್ಪ ಸಾರಥ್ಯದ ಪ್ರಸಿದ್ಧ ‘ಶಿವಾನಿ ಮ್ಯೂಸಿಕಲ್ಸ್’ ಸಂಗೀತ ರಸ ಸಂಜೆ ಕಾರ್ಯಕ್ರಮ ನೆರೆದವರನ್ನು ಮಂತ್ರಮುಗ್ಧಗೊಳಿಸಿತು. ಖ್ಯಾತ ಗಾಯಕರಾದ ರವೀಂದ್ರ ಪ್ರಭು, ಸಂಜನಾ ನವೀನ್ ಸೇರಿದಂತೆ ರಾಜ್ಯ ಹಾಗೂ ಹೊರ ರಾಜ್ಯದ ಗಾಯಕರ ಹಾಡಿನ ಮೋಡಿಗೆ ಅಭಿಮಾನಿಗಳು ಫುಲ್ ಫಿದಾ ಆದರು. ಡಾ. ರಾಜಕುಮಾರ್ ಹಾಡುಗಳನ್ನು ಹಾಡಿದ ಖ್ಯಾತ ಹಾಡುಗಾರ ಕೆ.ಆರ್. ಅಬ್ಬಾಸ್ ಹಾಡಿಗೆ ಅಭಿಮಾನಿಗಳ ಸಿಳ್ಳೆ ಚಪ್ಪಾಳೆ ಮುಗಿಲುಮುಟ್ಟಿತ್ತು.
ಶುಕ್ರವಾರದಂದು ವಿಜೃಂಭಣೆಯಿಂದ ಜಾತ್ರಮಹೊತ್ಸವ ,ತುಲಾಭಾರ ಹಾಗೂ ಡಕ್ಕೆ-ಬಲಿ ಸೇವೆಗಳು ನಡೆದವು.
ವರದಿ ಮತ್ತು ಚಿತ್ರ-ಯೋಗೀಶ್ ಕುಂಭಾಶಿ