ಮಂಗಳೂರು,ಜ.26 : ನಗರದ ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವ ಸಮಾರಂಭ ಆಚರಿಸುತ್ತಿದ್ದ ಸಂದರ್ಭ ವಿವಾದಾತ್ಮಕ ಎತ್ತಿನಹೊಳೆ ಯೋಜನೆಯ ವಿರುದ್ಧ ನೇತ್ರಾವತಿ ಸಂರಕ್ಷಣಾ ಸಮಿತಿ, ಸಹ್ಯಾದ್ರಿ ಸಂಚಾಯ ಸೇರಿದಂತೆ ನೇತ್ರಾವತಿ ನದಿ ಪರ ಹೋರಾಟ ಸಂಘಟನೆಗಳು ಕಪ್ಪು ಬಾವುಟ ಪ್ರದರ್ಶಿಸಲು ಪ್ರಯತ್ನಿಸಿ ಬಂಧನಕ್ಕೊಳಗಾದ ಘಟನೆ ಇಂದು ಬೆಳಿಗ್ಗೆ ನಡೆದಿದೆ.
ಇದರಿಂದ ನಗರದ ನೆಹರೂ ಮೈದಾನದಲ್ಲಿ ಇಂದು ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣಗೊಂಡಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಿದ ಪೊಲೀಸರು 17 ಮಂದಿ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಂಡು ಬಳಿಕ ಬಿಡುಗಡೆಗೊಳಿಸಿದರು.
ವಿವಾದಿತ ಯತ್ತಿನಹೊಳೆ ಯೋಜನೆ ವಿರೋಧಿಸಿ ಸಹ್ಯಾದ್ರಿ ಸಂರಕ್ಷಣಾ ವೇದಿಕೆಯು ಈ ಪ್ರತಿಭಟನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಗಣರಾಜ್ಯೋತ್ಸವ ಭಾಷಣಕ್ಕೂ ಮುನ್ನ ‘ನೇತ್ರಾವತಿ ಉಳಿಸಿ’ ಎಂದು ಆಗ್ರಹಿಸಿ ಗಣರಾಜ್ಯೋತ್ಸವ ಆಚರಣೆ ನಡೆಯುವ ನೆಹರೂ ಮೈದಾನಕ್ಕೆ ಮುತ್ತಿಗೆ ಹಾಕಿ ಉಸ್ತುವಾರಿ ಸಚಿವ ರಮಾನಾಥ ರೈ ಭಾಷಣ ಮಾಡುವ ಸಂದರ್ಭ ಕರಿಪತಾಕೆಯನ್ನು ಪ್ರದರ್ಶಿಸಲು ಸಿದ್ದರಾಗಿ ಬಂದಿದ್ದರು.
ಇಂದು ಬೆಳಿಗ್ಗೆ ಮುಖ್ಯ ಅತಿಥಿ, ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರು ನೆಹರೂ ಮೈದಾನಕ್ಕೆ ಆಗಮಿಸುವ ಕೆಲವೇ ಕ್ಷಣಗಳ ಮುನ್ನ ವೇದಿಕೆಯ ಬಳಿ ಒಟ್ಟಾದ ಎತ್ತಿನಹೊಳೆ ಯೋಜನೆ ಪ್ರತಿಭಟನಾಕಾರರು ಕಪ್ಪು ಪತಾಕೆಗಳನ್ನು ಪ್ರದರ್ಶಿಸಿ, ರೈ ವಿರುದ್ಧ ಘೋಷಣೆಗಳನ್ನು ಕೂಗಿದರು.
ತಕ್ಷಣ ಮಧ್ಯ ಪ್ರವೇಶಿಸಿದ ಪೊಲೀಸರು ಸಹ್ಯಾದ್ರಿ ಸಿಂಚನದ ದಿನೇಶ್ ಹೊಳ್ಳ, ಶಶಿಧರ್, ಸುದತ್ ಜೈನ್ ಸೇರಿದಂತೆ 17 ಪ್ರತಿಭಟನಾಕಾರರನ್ನು ಬಂಧಿಸಿ ಪಾಂಡೇಶ್ವರ ಠಾಣೆಗೆ ಕರೆದೊಯ್ದು ಬಳಿಕ ಎಲ್ಲರನ್ನು ಜಾಮೀನಿನಲ್ಲಿ ಬಿಡುಗೊಳಿಸಿದರು.