ಬಜ್ಪೆ,ಫೆ.09 : ಮದುವೆ ಮನೆಯ ಅಕ್ಕಪಕ್ಕದ ಮನೆಗೆ ನುಗ್ಗಿ ಕಳ್ಳತನ ನಡೆಸಿ ನಗ-ನಗದು ದೋಚಿ ಪರಾರಿಯಾದ ಕಳ್ಳನನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಬಜ್ಪೆ ಶ್ರೀನಗರಾ ನಿವಾಸಿ ಅಬ್ದುಲ್ ರಜಾಕ್(45) ಎಂದು ಗುರುತಿಸಲಾಗಿದೆ.
ಪೊಲೀಸರು ಅಬ್ದುಲ್ ರಜಾಕ್ ನನ್ನು ಸೋಮವಾರ ಕೈಕಂಬ ಕಂದವರ ಸಭಾಂಗಣದ ಬಳಿ ಬಂಧಿಸಿದ್ದು, ಈತನಿಂದ 380 ಗ್ರಾಂ ಚಿನ್ನ ಹಾಗೂ 68000 ಮೌಲ್ಯದ ವಿದೇಶಿ ಕರೆನ್ಸಿ, ಮೋಟಾರ್ ಸೈಕಲ್ ಸೇರಿದಂತೆ ಒಟ್ಟು 11,36,000 ರೂ. ಮೌಲ್ಯದ ಸೊತ್ತುನ್ನು ವಶಪಡಿಸಿಕೊಂಡಿದ್ದಾರೆ. ಪೊಲೀಸರಿಗೆ ಸಿಕ್ಕ ಮಾಹಿತಿ ಪ್ರಕಾರ ಈ ಇನ್ನು 6 ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ ಎಂದು ತಿಳಿಸಿದ್ದಾರೆ.
ಘಟನೆಯ ವಿವರ :
ಜನವರಿ 23 ರಂದು ,ಬಜ್ಪೆ ಸುಂಕದಕಟ್ಟೆ ಪ್ರದೇಶದ ನಾಲ್ಕೈದು ಮನೆಗಳಲ್ಲಿ ಕಳ್ಳತನವಾಗಿದ್ದು, ಸುಂಕದಕಟ್ಟೆ ಅಂಬಿಕಾ ನಗರದಲ್ಲಿರುವ ಮನೆ, ಬಜಪೆ ಕಟೀಲು ಮುಖ್ಯ ರಸ್ತೆಯಲ್ಲಿರುವ ಮನೆ, ಸುಂಕದಕಟ್ಟೆ ಪಾಲಿಟೆಕ್ನಿಕ್ ರಸ್ತೆಯಲ್ಲಿನ ಮನೆ, ಕಟ್ಟೆಯ ಸಮೀಪದ ಮನೆಯಲ್ಲಿ ಕಳವು ಮಾಡಿ. ಚಿನ್ನ ಹಾಗೂ ನಗದು ಕಳ್ಳತನ ಮಾಡಿ ಈತ ಪರಾರಿಯಾಗಿದ್ದ. ಕೆಲ ಚಿನ್ನದ ಒಡವೆ, ನಗದು ಕಳ್ಳತನ ಮಾಡಿದ್ದು ಓಡುವ ಭರದಲ್ಲಿ ಒಂದು ಚಿನ್ನದ ಸರವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾನೆ. ವಿಶೇಷವೆಂದರೆ ಈತ ಅಡುಗೆಯ ಕೋಣೆಯ ವೆಂಟಿಲೇಟರನ್ನು ಮುರಿದು ಒಳಗೆ ಹೊಕ್ಕು ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಎಂದು ವಿಚಾರಣೆ ವೇಳೆ ತಿಳಿದುಬಂದಿದೆ.