ಮಂಗಳೂರು, ಫೆ.12″ ಮಣಿಪುರ ಮೂಲದ ನರ್ಸ್ ಓರ್ವಳು ಮುಕ್ಕದಲ್ಲಿ ತಾನು ಕೆಲಸ ಮಾಡುತ್ತಿರುವ ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಪ್ರೇಮ ವೈಫಲ್ಯ ಇದಕ್ಕೆ ಕಾರಣವೆನ್ನಲಾಗಿದ್ದು, ಆಕೆಯ ಪ್ರಿಯತಮನನ್ನು ಪೊಲೀಸರು ಬಂಧಿಸಿದ್ದಾರೆ. ಕುಂದಾಪುರ ತಾಲೂಕು ಶಿರೂರು ನಿವಾಸಿ ರವೀಲ್ ಶರೀಫ್ (24) ಬಂಧಿತ ಆರೋಪಿ.
ಈತ 2013ರಲ್ಲಿ ಮಂಗಳೂರಿನ ಕಾಲೇಜೊಂದರಲ್ಲಿ ಫ್ಯಾಶನ್ ಡಿಸೈನಿಂಗ್ ವಿದ್ಯಾರ್ಥಿಯಾಗಿದ್ದಾಗ ಮೂಡಬಿದಿರೆಯಲ್ಲಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದ ಮಣಿಪುರ ಮೂಲದ ಯುವತಿಯ ಪರಿಚಯವಾಗಿತ್ತು. ಇದು ಬಳಿಕ ಪ್ರೇಮಕ್ಕೆ ತಿರುಗಿದ್ದು, ಇಬ್ಬರೂ ಹಲವೆಡೆ ಸುತ್ತಾಡಿದ್ದರು. ರವೀಲ್ ಶರೀಫ್ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ಅಕ್ರಮವಾಗಿ ದೈಹಿಕ ಸಂಪರ್ಕವನ್ನು ನಡೆಸಿದ್ದು, ಇದೀಗ ಮದುವೆಗೆ ನಿರಾಕಿರಿಸಿದ್ದಾನೆ. ಈ ಬಗ್ಗೆ ಆತನೊಂದಿಗೆ ಜಗಳವಾಡಿದ್ದ ಯುವತಿ ಖಿನ್ನತೆಗೊಳಗಾಗಿ ಫೆ.9ರಂದು ಆಸ್ಪತ್ರೆಯ ಹಾಸ್ಟೆಲ್ ನಲ್ಲಿ ವಿಪರೀತ ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಹಾಸ್ಟೆಲ್ ನ ಇತರ ನಿವಾಸಿಗಳು ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದು, ಆಪಾಯದಿಂದ ಪಾರಾಗಿದ್ದಾಳೆ.
ಯುವತಿಯ ದೂರಿನ ಮೇರೆಗೆ ರವೀಲ್ ಶರೀಫ್ ವಿರುದ್ಧ ಅತ್ಯಾಚಾರ ಮತ್ತು ವಂಚನೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಸುರತ್ಕಲ್ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯದಲ್ಲಿ ಹಾಜರು ಪಡಿಸಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಬಗ್ಗೆ ಮುಂದಿನ ತನಿಖೆ ನಡೆಯುತ್ತಿದೆ.