ಪುತ್ತೂರು, ಫೆ.13: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರಕಾರ ಆಡಳಿತಾತ್ಮಕ ವಿಚಾರದಲ್ಲಿ ಸಂಪೂರ್ಣ ವಿಫಲವಾಗಿದ್ದು, ಇದರಿಂದ ಜನತೆಯ ಆಕ್ರೋಶಕ್ಕೆ ಒಳಗಾಗಿದೆ. ಜಿಪಂ ಹಾಗೂ ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಇದು ಬಿಂಬಿತವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮರಳು ಮಾಫಿಯಾ ವಿಪರೀತವಾಗಿ ಬೆಳೆದಿದ್ದು, ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಜಿಲ್ಲೆಯಲ್ಲಿರುವ ಮೂವರು ಸಚಿವರು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡದೆ ಕೋಲ, ನೇಮಗಳಲ್ಲೇ ತಲ್ಲೀನರಾಗಿದ್ದಾರೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.
ಜಿಪಂ, ತಾಪಂ ಚುನಾವಣೆಯ ನಿಮಿತ್ತ ಪುತ್ತೂರು ತಾಲೂಕಿನಲ್ಲಿ ಪ್ರವಾಸ ಕೈಗೊಂಡ ಅವರು ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದರು.
ರಾಜ್ಯ ಗೃಹ ಇಲಾಖೆಯ ವಿಫಲತೆ ಎದ್ದು ಕಾಣುತ್ತಿದೆ. ರಾಜ್ಯದಲ್ಲಿ ನಡೆಯುತ್ತಿರುವ ಸರಣಿ ಕೊಲೆಗಳು ಇದಕ್ಕೆ ಸಾಕ್ಷಿಯಾಗಿವೆ. ೬೦೦ಕ್ಕಿಂತಲೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸರಕಾರದ ಅಸಮರ್ಥತೆಯ ಸಂಕೇತ. ಐಷಾರಾಮಕ್ಕಾಗಿ ದುಂದು ವೆಚ್ಚ ಮಾಡುತ್ತಿರುವ ಸರಕಾರದಲ್ಲಿ ಮೃತ ರೈತನಿಗೆ ನೀಡಲು ಹತ್ತು ಲಕ್ಷವೂ ಇಲ್ಲ ಎಂದು ಆಪಾದಿಸಿದರು.
ಕುಮ್ಕಿ ರೈತರ ಹಕ್ಕು. ಇದನ್ನು ರೈತರಿಗೆ ನೀಡಲು ಹಿಂದಿನ ಬಿಜೆಪಿ ಸರಕಾರ ಮಸೂದೆ ಸಿದ್ಧಪಡಿಸಿದ್ದರೂ ಅದನ್ನು ಕಾಂಗ್ರೆಸ್ ಸರಕಾರ ಇನ್ನೂ ನೀಡಿಲ್ಲ. ನಿಜವಾಗಿಯೂ ಸಿದ್ಧರಾಮಯ್ಯ ಅವರಿಗೆ ರೈತರ ಬಗ್ಗೆ ಕಾಳಜಿ ಇದ್ದರೆ ಕುಮ್ಕಿ ಹಕ್ಕು ನೀಡಲಿ ಎಂದು ಸವಾಲು ಹಾಕಿದ ಅವರು, ರಬ್ಬರ್ ಬೆಲೆ ಕುಸಿಯುತ್ತಿದ್ದರೂ ಒಂದು ರೂಪಾಯಿ ಬೆಂಬಲ ಬೆಲೆ ನೀಡಿಲ್ಲ ಎಂದು ಆರೋಪಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಂಜೀವ ಮಠಂದೂರು, ಪಕ್ಷದ ಪ್ರಮುಖರಾದ ಚನಿಲ ತಿಮ್ಮಪ್ಪ ಶೆಟ್ಟಿ, ಕೇಶವ ಗೌಡ ಬಜತ್ತೂರು, ರಾಜೇಶ್ ಬನ್ನೂರು, ಗೋಪಾಲಕೃಷ್ಣ ಹೇರಳೆ ಉಪಸ್ಥಿತರಿದ್ದರು.