ಗಲ್ಫ್

ಶ್ರೀ ವಿಶ್ವಕರ್ಮ ಸೇವಾ ಬಳಗ ಬಹರೈನ್ ಇದರ ವತಿಯಿಂದ ಆರನೇ ವರುಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗು ಐದನೇ ವಾರ್ಷಿಕೋತ್ಸವ

Pinterest LinkedIn Tumblr

21

ಬಹರೈನ್ ; ಇಲ್ಲಿನ ಶ್ರೀ ವಿಶ್ವಕರ್ಮ ಸೇವಾ ಬಳಗ ತನ್ನ ಆರನೆಯ ವರುಷದ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವ ಹಾಗು ಐದನೇ ವಾರ್ಷಿಕೋತ್ಸವವನ್ನು ಸ್ಥಳೀಯ ಇಂಡಿಯನ್ ಕ್ಲಬ್ಬಿನ ಸಭಾಂಗಣದಲ್ಲಿ ಇದೆ ನವೆಂಬರ್ ತಿಂಗಳ 6ನೇ ತಾರೀಖಿನ ಶುಕ್ರವಾರದಂದು ಬೆಳಿಗ್ಗೆ ಆಯೋಜಿಸಿದೆ .

ನಾಡಿನ ಖ್ಯಾತ ಜ್ಯೋತಿಷಿ ,ವಾಸ್ತು ಶಾಸ್ತ್ರಜ್ಞ ,ಅನರ್ಘ್ಯ ರತ್ನ ತಜ್ಞ ಶ್ರೀ ಅಶೋಕ್ ಪುರೋಹಿತ್ ರವರು ಈ ಪೂಜಾ ಮಹೋತ್ಸವದ ಪೌರೋಹಿತ್ವವನ್ನು ವಹಿಸಿಕೊಂಡಿದ್ದು ಬೆಳಿಗ್ಗೆ 9:30 ಘಂಟೆಗೆ ಸರಿಯಾಗಿ ಕಲಶ ಪ್ರತಿಷ್ಟೆಯೊಂದಿಗೆ ಪೂಜಾ ವಿಧಿ ವಿಧಾನಗಳು ಆರಂಭವಾಗಲಿರುವುದು . ತದನಂತರ ಭಜನೆ ,ಲಲಿತಸ್ತೋತ್ರ ಶತನಾಮಾವಳಿ ,ಮಹಾಪೂಜೆಯ ಮಂಗಳಾರತಿಯೊಂದಿಗೆ ಪೂಜಾ ಕೈಂಕರ್ಯಗಳು ಸಂಪೂರ್ಣಗೊಂಡು ಮಹಾಪ್ರಸಾದದ ಅಂಗವಾಗಿ ಎಲ್ಲಾ ಭಕ್ತಾದಿಗಳಿಗೂ ವಿಶೇಷವಾದ ಅನ್ನ ಸಂತರ್ಪಣೆಯನ್ನು ಮಾಡಲಾಗುವುದು .

ಶ್ರೀ ವಿಶ್ವಕರ್ಮ ಸೇವಾ ಬಳಗದ ಐದನೇ ವಾರ್ಷಿಕೋತ್ಸವದ ಅಂಗವಾಗಿ ಸಂಜೆ ” ಸಂಸ್ಕ್ರತಿ ಸಂಭ್ರಮ – 2015 ” ಎನ್ನುವ ವೈವಿಧ್ಯಮಯ ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿದೆ . ಸಂಜೆ 5:30 ಘಂಟೆಗೆ ಸರಿಯಾಗಿ ಚಾಲನೆಗೊಳ್ಳಲಿರುವ ಈ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಾಡಿನ ಖ್ಯಾತ ಗಾಯಕ ,ಸಂಗೀತ ನಿರ್ದೇಶಕ “ಎದೆ ತುಂಬಿ ಹಾಡುವೆನು ” ಖ್ಯಾತಿಯ ಶ್ರೀ ಯಶವಂತ್ ಆಚಾರ್ಯ ಹಾಗು ಜನಪ್ರಿಯ ಯುವ ಗಾಯಕಿ ಕುಮಾರಿ ಶ್ರುತಿ ಬೆಂಗಳೂರು ಇವರುಗಳು ಸುಮಧುರ ಹಾಡುಗಳ ಸಂಗೀತ ಕಾರ್ಯಕ್ರಮವನ್ನು ಸಾದರಪದಿಸಲಿರುವರು . ಈ ಸಾಂಸ್ಕ್ರತಿಕ ಕಾರ್ಯಕ್ರಮಕ್ಕೆ ಹೆಚ್ಚಿನ ಮೆರುಗು ನೀಡಲು ನಾಡಿನ ಖ್ಯಾತ ನೂಲು ಚಿತ್ರ ಕಲಾವಿದ ಶ್ರೀ ಗಣೇಶ್ ಆಚಾರ್ಯರವರು ವಿಶೇಷವಾಗಿ ದ್ವೀಪಕ್ಕೆ ಆಗಮಿಸುತಿದ್ದು ತಮ್ಮ ಕಲಾ ನೈಪುಣ್ಯತೆಯಿಂದ ನೆರೆದವರನ್ನು ರಂಜಿಸಲಿರುವರು .

ವಿಶ್ವಕರ್ಮ ಸಮುದಾಯದ ಪ್ರತಿಭಾವಂತ ಯುವನ್ರತ್ಯ ನಿರ್ದೇಶಕ ಪ್ರೀತಂ ಆಚಾರ್ಯರವರ ನ್ರತ್ಯ ನಿರ್ದೇಶನದಲ್ಲಿ ಸಮುದಾಯದ ಕಲಾವಿದರುಗಳಿಂದ ವೈವಿಧ್ಯಮಯ ನ್ರತ್ಯಗಳು ಪ್ರದರ್ಶನಗೊಳ್ಳಲಿರುವುದು ಮಾತ್ರವಲ್ಲದೆ ವಿವಿಧ ಮನೋರಂಜನಾ ಕಾರ್ಯಕ್ರಮಗಳೂ ಮೂಡಿಬರಲಿದೆ

ಈ ಎಲ್ಲಾ ಕಾರ್ಯಕ್ರಮಗಳಿಗೆ ಶ್ರೀ ವಿಶ್ವಕರ್ಮ ಸೇವಾ ಬಳಗ ಬಹರೈನ್ ನ ಅಧ್ಯಕ್ಷರಾದ ಶ್ರೀ ಸದಾಶಿವ ಆಚಾರ್ಯ ಹಾಗು ಇತರ ಪದಾಧಿಕಾರಿಗಳು ದ್ವೀಪದ ಕನ್ನಡಿಗರಿಗೆ ವಿಶೇಷವಾದ ಆಹ್ವಾನವನ್ನು ನೀಡಿದ್ದು ಕಾರ್ಯಕ್ರಮದ ಹೆಚ್ಚಿನ ವಿವರಗಳಿಗೆ ಅಧ್ಯಕ್ಷರಾದ ಶ್ರೀ ಸದಾಶಿವ ಆಚಾರ್ಯರವರನ್ನು ದೂರವಾಣಿ ಸಂಖ್ಯೆ 39298524,ಕಾರ್ಯದರ್ಶಿ ರಾಜೇಶ್ ಕೊಡೆತ್ತೂರ್ ಇವರನ್ನು ದೂರವಾಣಿ ಸಂಖ್ಯೆ 33285646ಹಾಗು ಮನೋರಂಜನಾ ಕಾರ್ಯದರ್ಶಿ ಸುಧೀರ್ ಆಚಾರ್ಯ ಇವರನ್ನು ದೂರವಾಣಿ ಸಂಖ್ಯೆ 39806560 ಮುಖೇನ ಸಂಪರ್ಕಿಸಬಹುದು .
ವರದಿ-ಕಮಲಾಕ್ಷ ಅಮೀನ್

Write A Comment