ನವದೆಹಲಿ: ಗಗನಕ್ಕೇರಿದ್ದ ಬೇಳೆಕಾಳುಗಳ ದರ ಸ್ವಲ್ಪಮಟ್ಟಿಗೆ ಕುಸಿದಿದೆ. ಮೆಟ್ರೋ ನಗರಗಳಲ್ಲಿ ಬೇಳೆಕಾಳುಗಳ ಬೆಲೆ ಪ್ರತಿ ಕೆಜಿಗೆ ರು.10ರಿಂದ ರು.15ರಷ್ಟು ಇಳಿಕೆಯಾಗಿದ್ದು, ತೊಗರಿ ಬೇಳೆ ಬೆಲೆ ರು.200ಕ್ಕಿಂತ ಕಡಿಮೆಯಾಗಿದೆ.
ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ 1.24ಲಕ್ಷ ಟನ್ ಬೇಳೆಕಾಳುಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರಿಂದ ಬೇಳೆಯ ಬೆಲೆ ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲಾಗಿದೆ ಎಂದು ಹೇಳಲಾಗಿದೆ. ಮೂಲಗಳ ಪ್ರಕಾರ ಇದುವರೆಗೂ ದೇಶದಲ್ಲಿ 10,903 ಅಕ್ರಮ ಬೇಳೆ ದಾಸ್ತಾನುಗಳ ಮೇಲೆ ದಾಳಿ ನಡೆಸಿದ್ದು, 1.24 ಲಕ್ಷ ಟನ್ನಷ್ಟು ಬೇಳೆಯನ್ನು ವಶಕ್ಕೆ ಪಡೆಯಲಾಗಿದೆ ಎಂದು ತಿಳಿದು ಬಂದಿದೆ.
ಗ್ರಾಹಕ ವ್ಯವಹಾರಗಳ ಸಚಿವಾಲಯದ ಪ್ರಕಾರ ಬೇಳೆ ಬೆಲೆ ಪ್ರತಿ ಕೆಜಿಗೆ ರು.191ಕ್ಕೆ ಇಳಿದಿದೆ. ನಿನ್ನೆಯಷ್ಟೆ ಪ್ರತಿ ಕೆಜಿಗೆ ರು.200 ಇತ್ತು. ಬೆಂಗಳೂರಲ್ಲಿ 180 ರಿಂದ 170 ರೂಪಾಯಿ ಆಸುಪಾಸಿನಲ್ಲಿದೆ. ದೆಹಲಿ ಹಾಗೂ ಚೆನ್ನೈನಲ್ಲಿ 172 ರಿಂದ 173 ರೂಪಾಯಿಗೆ ಬಂದಿದ್ದರೆ, ಕೊಲ್ಕತ್ತಾದಲ್ಲಿ 160 ರೂಪಾಯಿ ಆಸುಪಾಸಿನಲ್ಲಿದೆ. ಡಿಸೆಂಬರ್ ಒಳಗೆ ಪ್ರತಿ ಕೆಜಿಗೆ ಬೇಳೆ ದರ 120 ರಿಂದ 130 ರೂ. ಆಸುಪಾಸಿಗೆ ಬರುವ ನಿರೀಕ್ಷೆ ಇದೆ.