ನವದೆಹಲಿ: ಅಸಹಿಷ್ಣುತೆ ಕುರಿತಂತೆ ನಟ ಶಾರುಖ್ ಖಾನ್ ನೀಡಿದ್ದ ಹೇಳಿಕೆ ಇದೀಗ ಹಲವು ವಿವಾದಗಳನ್ನು ಸೃಷ್ಟಿ ಮಾಡುತ್ತಿದ್ದು, ಇದೀಗ ಬಿಜೆಪಿಯ ಮತ್ತೊಬ್ಬ ನಾಯಕ ಶಾರುಖ್ ಖಾನ್ ಅವರನ್ನು ಉಗ್ರ ಹಫೀಜ್ ಗೆ ಹೋಲಿಕೆ ಮಾಡಿದ್ದಾರೆ.
ಬಿಜೆಪಿ ನಾಯಕ ಯೋಗಿ ಆದಿತ್ಯನಾಥ್ ಶಾರುಖ್ ಖಾನ್ ಅವರನ್ನು ಮುಂಬೈ ದಾಳಿಯ ಸಂಚುಕೋರ ಉಗ್ರ ಹಫೀಜ್ ಸಯೀದ್ ಗೆ ಹೋಲಿಕೆ ಮಾಡಿದ್ದಾರೆ.
ಶಾರುಖ್ ಖಾನ್ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಶಾರುಖ್ ಖಾನ್ ಹಾಗೂ ಉಗ್ರ ಹಫೀಜ್ ನೀಡುವ ಹೇಳಿಕೆಯಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಶಾರುಖ್ ಹೇಳಿಕೆಗೆ ಈ ಹಿಂದೆ ಪ್ರತಿಕ್ರಿಯೆ ನೀಡಿ ಮತ್ತೆ ಹೇಳಿಕೆಯನ್ನು ಹಿಂಪಡೆದಿದ್ದ ವಿಜಯವರ್ಗೀಯ ಅವರಿಗೆ ಅವರ ಪಕ್ಷದಿಂದ ಹಾಗೂ ಇತರರಿಂದ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತದೆ ಎಂದು ಹೇಳಿದ್ದಾರೆ.
ಈ ಹಿಂದೆ ನಟ ಶಾರುಖ್ ಖಾನ್ ನೀಡಿದ್ದ ಅಸಹಿಷ್ಣುತೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದ ಬಿಜೆಪಿ ನಾಯಕ ಕೈಲಾಶ್ ವಿಜಯವರ್ಗೀಯ ಅವರು, ಶಾರುಖ್ ಖಾನ್ ಒಬ್ಬ ದೇಶದ್ರೋಹಿ. ಅವರು ಭಾರತದಲ್ಲೇ ನೆರೆಸಿದ್ದರೂ ಆತ್ಮ ಮಾತ್ರ ಪಾಕಿಸ್ತಾನದಲ್ಲಿದೆ. ಅವರ ಚಿತ್ರಗಳಿಗೆ ಕೋಟಿಗಟ್ಟಲೆ ಹಣ ಭಾರತದಿಂದ ಬರುತ್ತದೆ. ಆದರೆ ಇಂದು ಭಾರತದಲ್ಲಿಯೇ ಅಸಹಿಷ್ಣುತೆಯಿದೆ ಎಂದು ಆಲೋಚಿಸುತ್ತಿದ್ದಾರೆಂದು ಎಂದು ಹೇಳಿದ್ದರು. ವರ್ಗೀಯ ಅವರ ಹೇಳಿಕೆಗೆ ರಾಜಕೀಯ ವಲಯ ಹಾಗೂ ಸಾಮಾಜಿಕ ಜಾಲತಾಣದಾದ್ಯಂತ ಹಲವು ಟೀಕೆಗಳು ವ್ಯಕ್ತವಾಗಿದ್ದವು.
ನಂತರ ತಮ್ಮ ಹೇಳಿಕೆಯನ್ನು ಹಿಂಪಡೆದ ವರ್ಗೀಯ ಅವರು ಶಾರುಖ್ ಖಾನ್ ಶ್ರೇಷ್ಠ ನಟರಾಗಿದ್ದು, ನನಗೆ ಯಾರನ್ನೂ ನೋವುಂಟು ಮಾಡುವ ಉದ್ದೇಶವಿರಲಿಲ್ಲ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ. ನನ್ನ ಹೇಳಿಕೆಯನ್ನು ಹಿಂಪಡೆಯುತ್ತಿದ್ದೇನೆಂದು ಹೇಳಿದ್ದರು.