ಮುಂಬೈ: ಗುದ್ದೋಡು ಪ್ರಕರಣದ ಆರೋಪಿ ಬಾಲಿವುಡ್ ನಟ ಸಲ್ಮಾನ್ಖಾನ್ ಪಾಲಿಗೆ ಕೊಂಚ ನಿರಾಳ ಒದಗುವ ಸೂಚನೆ ಸಿಕ್ಕಿದೆ.
ಸಲ್ಮಾನ್ಖಾನ್ ಮದ್ಯಪಾನ ಮಾಡಿದ್ದನ್ನು ಹಾಗೂ ಕುಡಿದು ವಾಹನ ಚಾಲನೆ ಮಾಡಿದ್ದನ್ನು ಸಾಬೀತು ಪಡಿಸಲು ಬೇಕಾಗಿರುವ ಬಲವಾದ ಸಾಕ್ಷಿಗಳು ಇಲ್ಲದಿರುವುದನ್ನು ವಿಚಾರಣೆಯ ಸಮಯದಲ್ಲಿ ಗಮನಿಸಿರುವುದರಿಂದ ಗುರುವಾರ ಹೊರಬರಲಿರುವ ಮುಂಬೈ ಹೈಕೋರ್ಟ್ ತೀರ್ಪಿನ ಬಗ್ಗೆ ಕುತೂಹಲ ಹೆಚ್ಚಾಗಿದೆ.
ಸತತ ಮೂರನೇ ದಿನಕ್ಕೆ ಕಾಲಿಟ್ಟ ಸಲ್ಮಾನ್ ಖಾನ್ ಮನವಿ ಅರ್ಜಿಯ ವಿಚಾರಣೆ ಗುರುವಾರ ಕೊನೆಗೊಳ್ಳಲಿದ್ದು, ಸಲ್ಮಾನ್ ಹಣೆಬರಹ ಸಂಜೆಯ ಹೊತ್ತಿಗೆ ನಿರ್ಧಾರವಾಗಲಿದೆ. 2002ರ ಈ ಪ್ರಕರಣದಲ್ಲಿ ಐದುವರ್ಷ ಜೈಲುಶಿಕ್ಷೆಯ ವಿರುದ್ಧ ಸಲ್ಮಾನ್ ಸಲ್ಲಿಸಿರುವ ಮನವಿ ಅರ್ಜಿಯ ವಿಚಾರಣೆ ನಡೆಸುತ್ತಿರುವ ನ್ಯಾ.ಎ .ಆರ್ ಜೋಷಿ, ಪ್ರತ್ಯಕ್ಷ ಸಾಕ್ಷಿ ರವೀಂದ್ರ ಪಾಟೀಲ್ ರ ಹೇಳಿಕೆಗಳ ಬಗ್ಗೆಯೂ ಅನುಮಾನ ವ್ಯಕ್ತಪಡಿಸಿದ್ದಾರೆ.
ಮೂಲ ಎಫ್ ಐಆರ್ಗೂ ನಂತರದ ಹೇಳಿಕೆಗಳಿಗೂ ವ್ಯತ್ಯಾಸವಿದೆ ಎಂದಿದ್ದಾರೆ. ಏತನ್ಮಧ್ಯೆ ಅಂದು ಕಾರ್ನಲ್ಲಿದ್ದ ಗಾಯಕ ಕಮಾಲ್ ಖಾನ್ ರನ್ನೂ ಪರೀಕ್ಷೆಗೆ ಒಳಪಡಿಸಬೇಕಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ.