ಚಂಡೀಗಢ: ಹಸೆಮಣೆಯೇರಿ ಕುಳಿತ ವಧು ತಾಳಿ ಕಟ್ಟಿಸಿ ಕೊಳ್ಳುವ ಮುನ್ನ ಆಗ್ರಹವೊಂದನ್ನು ವ್ಯಕ್ತ ಪಡಿಸುತ್ತಾಳೆ. ಅದನ್ನು ಕೇಳಿ ಅಲ್ಲಿ ನೆರೆದಿದ್ದವರಿಗೆಲ್ಲಾ ಅಚ್ಚರಿ!. ಆದರೆ ವರ ಆಕೆಯ ಆಸೆಯನ್ನು ಪೂರೈಸುವುದಾಗಿ ಮಾತು ನೀಡುತ್ತಾನೆ. ಆಮೇಲೆ ತಾಳಿ ಕಟ್ಟಿ, ಮದುವೆ ಸಾಂಗವಾಗಿ ನೆರವೇರುತ್ತದೆ.
ಇದು ಯಾವುದೇ ಸಿನಿಮಾ ಕತೆಯಲ್ಲ, ಹರಿಯಾಣದ ಬಿವಾನಿಯಲ್ಲಿರುವ ಬಿಲಾವಲ್ ಗ್ರಾಮದಲ್ಲಿ ನಡೆದ ನೈಜ ಘಟನೆ.
ವಧುವಿನ ಆಗ್ರಹ ಏನು?: ತಾಳಿ ಕಟ್ಟಿಸುವ ಮುನ್ನ ಆಕೆ ವರನಲ್ಲಿ ಪ್ರಸ್ತಾಪಿಸಿದ ಆಗ್ರಹವೇನು ಗೊತ್ತೇ?ನನ್ನನ್ನು ಮದುವೆ ಆಗಬೇಕಾದರೆ 11 ಬಡ ಹೆಣ್ಮಕ್ಕಳಿಗೆ ವಿದ್ಯಾಭ್ಯಾಸದ ಖರ್ಚು ವಹಿಸಬೇಕು ಎಂಬುದಾಗಿತ್ತು. ಆಕೆಯ ಆಸೆಯನ್ನು ಕೇಳಿ ಹಿರಿಯರಿಗೆ ಅಚ್ಚರಿಯಾದರೂ, ವರನಿಗೆ ಅದು ಸಮ್ಮತವಾಗಿತ್ತು. ವರ ಸಮ್ಮತಿ ನೀಡಿದ ಕೂಡಲೇ ಅಲ್ಲಿ ನೆರೆದಿದ್ದ ಹಿರಿಯರಿಗೂ ಬಂಧುಗಳಿಗೂ ವಧು ಹೇಳಿದ್ದು ಸರಿಯೆನಿಸಿ, ನವದಂಪತಿಗಳನ್ನು ಹಾರೈಸಿದರು.
ಬಿಲಾವಲ್ ಗ್ರಾಮದ ಶಿಕ್ಷಕರೊಬ್ಬರಕ ಮಗಳಾದ ಪೂನಂ ಮತ್ತು ಸಂದೀಪ್ ಕುಮಾರ್ಗೆ ಮದುವೆ ನಿಶ್ಚಯವಾಗಿತ್ತು. ಮದುವೆ ಮಂಟಪದಲ್ಲಿ ತಾಳಿ ಕಟ್ಟಿಸಿಕೊಳ್ಳುವುದಕ್ಕೆ ಮುನ್ನ ಎದ್ದು ನಿಂತ ಪೂನಂ, ಸಂದೀಪ್ 11 ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಖರ್ಚು ವಹಿಸುವುದಾದರೆ ಮಾತ್ರ ನಾನು ಆತನನ್ನು ಮದುವೆಯಾಗುತ್ತೇನೆ. ಇಲ್ಲದಿದ್ದರೆ ಈ ಮದುವೆ ಬೇಡವೇ ಬೇಡ ಎಂದು ಹೇಳಿದ್ದಳು.
ಸ್ನಾತಕೋತ್ತರ ಪದವಿ ಪಡೆದಿರುವ ಪೂನಂ ಸಾಮಾಜಿಕ ಕಾರ್ಯಗಳನ್ನೂ ಮಾಡುತ್ತಿದ್ದಾಳೆ. ಈ ವಿಷಯದ ಬಗ್ಗೆ ಸಂದೀಪ್ಗೆ ಮೊದಲೇ ಸೂಚನೆ ನೀಡಿದ್ದೆ ಎಂದು ಮಾಧ್ಯಮವೊಂದರಲ್ಲಿ ಮಾತನಾಡಿದ ಪೂನಂ ಹೇಳಿದ್ದಾಳೆ.