ನವದೆಹಲಿ: ಭಾರತದಲ್ಲಿ ಅಸಹಿಷ್ಣುತೆ ಇದೆ ಎಂದು ಹೇಳಿಕೆ ನೀಡಿ ವಿವಾದಕ್ಕೆ ಸಿಲುಕ್ಕಿದ್ದ ಬಾಲಿವುಡ್ ನಟ ಶಾರುಖ್ ಖಾನ್ ಇದೀಗ ಉಲ್ಟಾ ಹೊಡೆದಿದ್ದು, ದೇಶದಲ್ಲಿ ಅಸಹಿಷ್ಣುತೆ ಇಲ್ಲ. ಎಲ್ಲವೂ ಸರಿಯಿದೆ ಎಂದು ಹೇಳಿದ್ದಾರೆ.
ವಿವಾದ ಕುರಿತಂತೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ದೇಶದಲ್ಲಿ ಅಸಹಿಷ್ಣುತೆ ಇದೆ ಎಂಬುದನ್ನು ನಾನು ನಂಬುವುದಿಲ್ಲ. ಈ ಹಿಂದೆ ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಮುಂದಿನ ಪೀಳಿಗೆ ಕುರಿತಂತೆ ಮಾತನಾಡುವಂತೆ ಈ ಹಿಂದೆ ಕೇಳಲಾಗಿತ್ತು. ಹೀಗಾಗಿ ಮಾತನಾಡಿದ್ದೆ. ಈ ವೇಳೆ ಯುವ ಜನತೆಗೆ ನೀಡಿದ ಸಲಹೆಯನ್ನು ಬೇರೆ ರೀತಿಯಲ್ಲಿ ಅರ್ಥೈಸಲಾಗಿದೆ. ದೇಶದಲ್ಲಿ ಶೇ.50 ರಷ್ಟು ಜನರು 25 ವರ್ಷದವರಾಗಿದ್ದಾರೆ. ಧರ್ಮ, ಜಾತಿ, ಬಣ್ಣ, ಮತ ಅಥವಾಗ ಲಿಂಗದ ಆಧಾರದ ಮೇಲೆ ಯಾರನ್ನೂ ಭೇದ ಮಾಡಬಾರದು ಎಂದು ಸಲಹೆ ನೀಡಿದ್ದೆ ಹೊರತು ಅಸಹಿಷ್ಣುತೆ ಇದೆ ಎಂಬ ಅರ್ಥದಲ್ಲಿ ಹೇಳಿಕೆ ನೀಡಿಲ್ಲ.
ನಮ್ಮ ದೇಶದಲ್ಲಿ ಎಲ್ಲವೂ ಸರಿಯಿದೆ. ನಾನು ಧೂಮಪಾನ ಮಾಡುವುದನ್ನು ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಸಂದರ್ಭದಲ್ಲೂ ಯಾರೊಬ್ಬರೂ ನನ್ನ ಬಳಿ ಅಸಹಿಷ್ಣುತೆಯಿಂದ ವರ್ತಿಸಿಲ್ಲ. ನಮ್ಮ ದೇಶದಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಹೇಳಿದ್ದಾರೆ.
ನಾನೊಬ್ಬ ದೇಶಭಕ್ತ ಹಾಗೂ ರಾಷ್ಟ್ರೀವಾದಿ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ಕ್ಷಮಿಸಿ. ನಾವೀಗ ಆಧುನಿಕ ಯುಗದಲ್ಲಿ ಉತ್ತಮ ದೇಶದ ಹಾಗೂ ಸ್ಥಳದಲ್ಲಿದ್ದೇವೆ. ಇಲ್ಲಿಯೇ ಯಾವಾಗಲೂ ಇರಬೇಕು, ಇರುತ್ತೇವೆ. ದೇಶಕ್ಕೆ ಒಳ್ಳೆಯ ಶಕ್ತಿಯಾಗಿ ನೆಲೆಸಬೇಕು. ಪ್ರತೀಯೊಂದು ಯುವ ಪೀಳಿಯಲ್ಲೂ ಒಂದಲ್ಲ ಒಂದು ಸಣ್ಣ ಸಮಸ್ಯೆಗಳು ಇರುತ್ತವೆ. ನಾನು ಯಾವಾಗ ಏನೇ ಮಾತನಾಡಿದರೂ, ಅದು ತಪ್ಪಾಗಿ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.