ನವದೆಹಲಿ: ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿರುವ ಹರ್ಯಾಣ ಸರ್ಕಾರದ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದು, ಇದರ ಬಗ್ಗೆ ಸುಪ್ರೀಂ ಕೋರ್ಟ್ ನ ಸಾಂವಿಧಾನಿಕ ಪೀಠ ಮತ್ತೊಮ್ಮೆ ಅವಲೋಕನ ನಡೆಸಬೇಕಿದೆ ಎಂದು ಖ್ಯಾತ ಅರ್ಥಶಾಸ್ತ್ರಜ್ಞ ಅಮಾರ್ತ್ಯಸೇನ್ ಹೇಳಿದ್ದಾರೆ.
ಅವರ ‘ದಿ ಕಂಟ್ರಿ ಆಫ್ ಫಸ್ಟ್ ಬಾಯ್ಸ್’ ಕೃತಿ ಬಗ್ಗೆ ನಡೆದ ಚರ್ಚಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅಮಾರ್ತ್ಯ ಸೇನ್, ನಮ್ಮ ಉದ್ದೇಶಗಳು ಹಾಗೂ ದೇಶದ ಸ್ಥಿತಿಗಳ ವ್ಯತ್ಯಾಸಗಳನ್ನು ಗುರುತಿಸಬೇಕಿದೆ. ಎಲ್ಲರೂ ವಿದ್ಯಾವಂತರಾಗಿ ಎಲ್ಲರ ಮನೆಯಲ್ಲೂ ಶೌಚಾಲಯ ವ್ಯವಸ್ಥೆ ಬರುವವರೆಗೆ ಅವರ ಹಕ್ಕುಗಳನ್ನು ಕಸಿಯುವುದು ಸರಿಯಲ್ಲ, ಈಗಾಗಲೇ ಸಾಕಷ್ಟು ಕಳೆದುಕೊಂಡಿರುವ ವರ್ಗದ ಜನರ ಹಕ್ಕುಗಳನ್ನು ಕಸಿದುಕೊಳ್ಳುವುದು ಸರಿಯಲ್ಲ.
ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಹರ್ಯಾಣ ಸರ್ಕಾರ ವಿಧಿಸಿರುವ ಕನಿಷ್ಠ ವಿದ್ಯಾರ್ಹತೆ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದ್ದರೂ, ಸಾಂವಿಧಾನಿಕ ಪೀಠ ಈ ಬಗ್ಗೆ ಮತ್ತೊಮ್ಮೆ ಅವಲೋಕನ ನಡೆಸಬೇಕೆಂದು ಸೇನ್ ಹೇಳಿದ್ದಾರೆ.
ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಇರುವ ಮಾನದಂಡಗಳ ಪೈಕಿ ಶೌಚಾಲಯ ಹೊಂದಿರುವುದು ಹಾಗೂ ಕನಿಷ್ಠ 10 ತರಗತಿ ತೇರ್ಗಡೆಯಾಗಿರುವುದನ್ನು ಸೇರಿಸಿ ಹರ್ಯಾಣ ಸರ್ಕಾರ ಸೆಪ್ಟೆಂಬರ್ ನಲ್ಲಿ ಮಸೂದೆ ಜಾರಿಗೊಳಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ಸಹ ಗ್ರೀನ್ ಸಿಗ್ನಲ್ ನೀಡಿತ್ತು. ಜನವರಿ 2016 ರಲ್ಲಿ ಹರ್ಯಾಣದಲ್ಲಿ ಪಂಚಾಯತ್ ಚುನಾವಣೆ ನಡೆಯಲಿದೆ.