ನವದೆಹಲಿ, ಡಿ.19: ಹೆಸರು ಹೇಳಿದರೇ ಮೈ ನಡುಕ ಹುಟ್ಟಿಸುವ ಜಗತ್ತಿನ ಕ್ರೂರಾತಿಕ್ರೂರ ಅಲ್ಖೈದಾದ ಭಾರತೀಯ ಶಾಖೆಯ ಮುಖ್ಯಸ್ಥ 40ರ ಹರೆಯದ ಸನಾವುಲ್ ಹಕ್ ಈ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕುಟುಂಬವೊಂದರ ಸಂತಾನ ಎಂಬ ತೀವ್ರ ಆತಂಕಕಾರಿ ವಿಷಯವನ್ನು ಗುಪ್ತಚರ ಇಲಾಖೆ ಹೊರಹಾಕಿದೆ.
ಅಲ್-ಖೈದಾ ಇನ್ ಇಂಡಿಯನ್ ಸಬ್ಕಾಂಟಿನೆಂಟ್ (ಎಕ್ಯುಐಸಿ) ಎಂಬ ಕುಖ್ಯಾತ ಸಂಘಟನೆಯ ನಾಯಕತ್ವ ವಹಿಸಿ ಭಾರತವನ್ನು ನಾಶ ಮಾಡಲು ಹೊರಟಿರುವ ಈ ಸನಾ-ವುಲ್-ಹಕ್ಗೆ ಅಲ್ಖೈದಾ ಮುಖ್ಯಸ್ಥ ಆಯ್ಮಾನ್ ಜವಾಹಿರಿ ಇಟ್ಟ ಹೆಸರು ಮೌಲಾನಾ ಅಸೀಮ್ ಉಮರ್, ಇವನ್ನು ಈ ರಾಷ್ಟ್ರ ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದ್ದಾನೆ.
ಇವನ ಜೀವನವೇ ಒಂದು, ರೋಚಕ, ಭಯಾನಕ ಕಥನ. ರಾಜಧಾನಿ ದೆಹಲಿಗೆ ಕೇವಲ 200 ಕಿ.ಮೀ. ದೂರದಲ್ಲಿರುವ ಉತ್ತರಪ್ರದೇಶದ ಸಂಭಾಲ್ನ ಹೆಸರಾಂತ ಸ್ವಾತಂತ್ರ್ಯ ಹೋರಾಟಗಾರ 75 ವರ್ಷದ ಇರ್ಫಾನ್-ಉಲ್-ಹಕ್ ಪುತ್ರ ಈ ಸನಾ ಉಲ್ ಹಕ್. ಕಳೆದ ಆರು ವರ್ಷಗಳ ಹಿಂದೆ ಮಗ ಭಯೋತ್ಪಾದಕ ಸಂಘಟನೆಗೆ ಸೇರಿದ್ದಾನೆ ಎಂದು ಗೊತ್ತಾದಾಗಲೇ ಅವನು ನಮ್ಮ ಪಾಲಿಗೆ ಸತ್ತ… ಎನ್ನುತ್ತಾಳೆ ಅವನ 70ವರ್ಷದ ವೃದ್ಧ ತಾಯಿ.
ಕಳೆದ 14 ವರ್ಷಗಳಿಂದ ನಾಪತ್ತೆಯಾಗಿದ್ದ ಮಗ, ಅಲ್ಖೈದಾ ಸೇರಿದ್ದಾನೆ ಎಂದು ಗೊತ್ತಾಗಿದ್ದು, ಹೆತ್ತವರಿಗೆ 2009ರಲ್ಲಿ. ಒಂದು ದಿನ ಇದ್ದಕ್ಕಿದ್ದಂತೆ ಸಂಬಾತ ಜಿಲ್ಲೆಯ ದೀಪ ಸರಾಮ್ ಎಂಬ ಹಳ್ಳಿಯಲ್ಲಿರುವ ಈ ವೃದ್ಧ ದಂಪತಿ ಮನೆಗೆ ಬಂದ ಗುಪ್ತಚರ ಅಧಿಕಾರಿಗಳು, ಈ ವಿಷಯ ತಿಳಿಸಿದಾಗ ನಮಗೆ ಆಘಾತವಾಗಿತ್ತು. ಅವನು ಸತ್ತು ಹೋಗಿದ್ದಾನೆಂದೇ ಭಾವಿಸಿದ್ದೆವು. ಈಗಲೂ ಅವನು ಸತ್ತು ಹೋಗಿದ್ದಾನೆ. ಈ ಮನೆಗೂ ಅವನಿಗೂ ಸಂಬಂಧವೇ ಇಲ್ಲ ಎಂಬುದು ಹೆತ್ತವರ ನೋವಿನ ಮಾತು. ಬ್ರಿಟಿಷರ ಗುಂಡಿಗೆ ಎದೆಯೊಡ್ಡಿ ಈ ದೇಶದ ಸ್ವಾತಂತ್ರ್ಯಕ್ಕಾಗಿ ಸೆಣಸಿದ ಮನೆತನ ನಮ್ಮದು. ಹಾಗಾಗಿ ಈ ಸುದ್ದಿ ನಮಗೆ ಸಿಡಿಲು ಹೊಡೆದಂತಾಯಿತು ಎಂದು ಇರ್ಫಾನ್ ಉಲ್ ಹಕ್ ಹೇಳುತ್ತಾನೆ.