ನವದೆಹಲಿ: ನ್ಯಾಷನಲ್ ಹೆರಾಲ್ಡ್ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಶನಿವಾರ ನ್ಯಾಯಾಲಯಕ್ಕೆ ಖುದ್ದು ಹಾಜರಾದರು. ಬಳಿಕ ನ್ಯಾಯಾಲಯ ಇಬ್ಬರಿಗೂ ಜಾಮೀನು ನೀಡಿತು. ವಿಚಾರಣೆಯನ್ನು ಫೆ. 20ಕ್ಕೆ ಮುಂದೂಡಿದೆ.
₹ 50 ಸಾವಿರಗಳ ಠೇವಣಿ ಮತ್ತು ಒಬ್ಬರ ಭದ್ರತೆ ಪಡೆದು ಜಾಮೀನು ನೀಡಲಾಗಿದೆ. ಇತರೆ ಯಾವುದೇ ಷರತ್ತುಗಳನ್ನು ವಿಧಿಸಿಲ್ಲ. ವಿಚಾರಣೆಯನ್ನು ಫೆ. 20ಕ್ಕೆ ಮುಂದೂಡಲಾಗಿದೆ ಎಂದು ಹಿರಿಯ ವಕೀಲ ಕಪಿಲ್ ಸಿಬಲ್ ಸುದ್ದಿಗಾರರಿಗೆ ತಿಳಿಸಿದರು.
ಪ್ರಕರಣ ಸಂಬಂದ ಮೋತಿಲಾಲ್ ವೊರಾ, ಅಸ್ಕರ್ ಫರ್ನಾಂಡಿಸ್, ಸುಮನ್ ದೊಬೆ ಅವರೂ ನ್ಯಾಯಾಲಯಕ್ಕೆ ಹಾಜರಾಗಿದ್ದು, ಈ ಮೂವರಿಗೂ ಜಾಮೀನು ನೀಡಲಾಗಿದೆ.
ಸೋನಿಯಾ ಗಾಂಧಿ ಅವರಿಗೆ ಮಾಜಿ ಪ್ರಧಾನಿ ಮನಮೋಹನ ಸಿಂಗ್, ರಾಹುಲ್ ಗಾಂಧಿ ಅವರಿಗೆ ಪ್ರಿಯಾಂಕಾ ವಾದ್ರಾ, ಆಸ್ಕರ್ ಫರ್ನಾಂಡಿಸ್ ಹಾಗೂ ಗುಲಾಂ ನಬಿ ಆಜಾದ್, ಅಜಯ್ ಮಾಕನ್ ಸೇರಿದಂತೆ ಇತರರಿಗೆ ಎ.ಕೆ. ಆ್ಯಂಟನಿ ಅವರು ಭದ್ರತೆ ನೀಡಿದ್ದಾರೆ. ಮತ್ತೊಬ್ಬ ಆರೋಪಿ ಸ್ಯಾಮ್ ಪಿತ್ರೋಡ ಅವರಿಗೆ ವೈಯಕ್ತಿಕ ವೈದ್ಯಕೀಯ ಸಮಸ್ಯೆಯ ಕಾರಣದಿಂದ ವಿನಾಯ್ತಿ ನೀಡಲಾಗಿತ್ತು.
ದೆಹಲಿಯಲ್ಲಿನ ಪಟಿಯಾಲ ಹೌಸ್ ಜಿಲ್ಲಾ ನ್ಯಾಯಾಲಯಕ್ಕೆ ಸೋನಿಯಾ ಮತ್ತು ರಾಹುಲ್ ಅವರು ಬಿಗಿ ಭದ್ರತೆಯೊಂದಿಗೆ ನ್ಯಾಯಾಲಯಕ್ಕೆ ಹಾಜರಾದರು. ನ್ಯಾಯಾಲಯದ ಆವರಣದಲ್ಲಿ ಭದ್ರತೆ ಕಲ್ಪಿಸಲಾಗಿತ್ತು.
ವಿರೋಧ: ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರಿಗೆ ಜಾಮೀನು ನೀಡಿರುವುದನ್ನು ಸುಬ್ರಮಣಿಯನ್ ಸ್ವಾಮಿ ವಿರೋಧಿಸಿದ್ದಾರೆ.