ಹೈದ್ರಾಬಾದ್, ಡಿ.22-ಖಿನ್ನತೆಗೆ ಒಳಗಾದ ಟೆಕ್ಕಿಯೊಬ್ಬ ಕತ್ತಿ ಝಳಪಿಸಿ ಪೊಲೀಸರ ಮೇಲೂ ದಾಳಿ ನಡೆಸಿ ಕೊನೆಗೆ ಪೊಳೀಸರ ಗುಂಡಿಗೆ ಬಲಿಯಾದ ಘಟನೆ ಕರೀಂನಗರ ಠಾಣೆಯ ಲಕ್ಷ್ಮೀನಗರದಲ್ಲಿ ನಡೆದಿದೆ.
ಲಕ್ಷ್ಮೀನಗರದ ನಿವಾಸಿ ಬಲ್ವಿಂದರ್ ಸಿಂಗ್ ಪೊಲೀಸರ ಗುಂಡಿಗೆ ಬಲಿಯಾದ ಟೆಕ್ಕಿ. ಬೆಂಗಳೂರಿನ ಒರಾಕಲ್ ಕಂಪೆನಿಯಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿದ್ದು ಐಎಎಸ್ ಪರೀಕ್ಷೆ ಬರೆದು ಅನುತ್ತೀರ್ಣನಾಗಿದ್ದ. ಈತ ಮಾನಸಿಕ ಖಿನ್ನತೆಗೆ ಒಳಗಾಗಿ ಇತ್ತೀಚೆಗೆ ಲಕ್ಷ್ಮೀನಗರದಲ್ಲಿನ ಮನೆಯಲ್ಲಿದ್ದ. ಇಂದು ಬೆಳಗ್ಗೆ ಕತ್ತಿ ಹಿಡಿದು ತಂದೆ-ತಾಯಿಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಬಿಡಿಸಲು ಬಂದ ಅಣ್ಣನ ಮೇಲೂ ಕತ್ತಿ ಝಳಪಿಸಿ ಮನೆಯಿಂದ ಹೊರಬಂದಿದ್ದಾನೆ. ಆಗ ಹಿಡಿಯಲು ಬಂದ ಜನರ ಮೇಲೂ ಆಕ್ರಮಣ ನಡೆಸಿದ್ದಾನೆ.
ಸುದ್ದಿ ತಿಳಿದು ಕರೀಂನಗರ ಠಾಣೆ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಬಲ್ವಿಂದರ್ನನ್ನು ಹಿಡಿಯಲು ಯತ್ನಿಸಿದಾಗ ಅವರ ಮೇಲೂ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಇದರಿಂದಾಗಿ ಒಬ್ಬ ಪೊಲೀಸ್ ಸಿಬ್ಬಂದಿಯ ಕಿರು ಬೆರಳು ತುಂಡಾಗಿದ್ದರೆ, ಮತ್ತೊಬ್ಬ ಸಿಬ್ಬಂದಿಯ ಕೈ ಸೀಳಿದೆ. ಅಲ್ಲದೆ ಈತ ಕತ್ತಿ ಹಿಡಿದು ಜನರು ಹಾಗೂ ಪೊಲೀಸರ ಮೇಲೆ ಎರಗಲು ಮುಂದಾದಾಗ ಪೊಲೀಸರು ಗುಂಡು ಹಾರಿಸಿದ್ದಾರೆ. ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡ ಬಲ್ವಿಂದರ್ನನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ, ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ಧಾನೆ.