ತಿರುವನಂತಪುರ, ಡಿ.26: ಸೌದಿ ಅರೇಬಿಯಾದಲ್ಲಿ ಮಾಲಕರಿಂದ ದೈಹಿಕ ಹಾಗೂ ಮಾನಸಿಕ ಹಿಂಸೆ ಅನುಭವಿಸಿದ್ದ ಮೂವರು ಯುವಕರು ಶನಿವಾರ ಬೆಳಗ್ಗೆ ತಿರುವನಂತಪುರಕ್ಕೆ ವಾಪಸ್ಸಾಗಿದ್ದಾರೆ.
ಇಂದು ಮುಂಜಾನೆ 2:30ಕ್ಕೆ ಮೂವರು ಯುವಕರು ತಿರುವನಂತಪುರಕ್ಕೆ ಎಫ್ಝಡ್ 439 ವಿಮಾನದಲ್ಲಿ ಬಂದಿಳಿದರು.
ಆಲಪ್ಪುಝ ಜಿಲ್ಲೆಯ ಹರಿಪಾದ ನಿವಾಸಿಗಳಾದ ಮೂವರು ಯುವಕರು ಸೌದಿ ಅರೇಬಿಯಾದಲ್ಲಿ ನಿಗದಿಪಡಿಸಿದ ಕೆಲಸ ನೀಡದೆ ಇಟ್ಟಿಗೆ ಗೂಡಿನಲ್ಲಿ ಕೆಲಸ ಸೇರಿದಂತೆ ಬೇರೆ ಬೇರೆ ಕೆಲಸ ನೀಡಿ ಕಿರುಕುಳ ನೀಡಲಾಗಿತ್ತು.
ತಮಗೆ ನೀಡಲಾಗುತ್ತಿರುವ ಹಿಂಸೆಯ ಬಗ್ಗೆ ಯುವಕರು ವಿಡಿಯೋ ದಾಖಲೆಯನ್ನು ವಾಟ್ಸ್ ಆಪ್ ಮೂಲಕ ರವಾನಿಸಿದ್ದರು. ಈ ವಿಚಾರ ಕೇರಳದಲ್ಲಿ ತಲ್ಲಣವನ್ನುಂಟು ಮಾಡಿತ್ತು. ಕೇರಳದ ಮುಖ್ಯಮಂತ್ರಿ ಉಮನ್ ಚಾಂಡಿ ಈ ವಿವಾದ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ಗಮನ ಸೆಳೆದಿದ್ದರು.
ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಭಾರತದ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ತೊಂದರೆಗೊಳಗಾದ ಯುವಕರನ್ನು ತವರಿಗೆ ತಲುಪಿಸಲು ಕ್ರಮ ಕೈಗೊಳ್ಳುವಂತೆ ಕೇಳಿಕೊಂಡಿತ್ತು.