ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಪಾಕಿಸ್ತಾನಕ್ಕೆ ಸಪ್ರೈಸ್ ಭೇಟಿ ನೀಡುವ ಕೆಲವು ಗಂಟೆಗಳ ಮುನ್ನ, ಅಖಂಡ ಭಾರತ ನಿರ್ಮಾಣಕ್ಕಾಗಿ ಒಂದು ದಿನ ಭಾರತ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ಮತ್ತೆ ಒಂದಾಗುವ ವಿಶ್ವಾಸವಿದೆ ಎಂದು ಆರ್ಎಸ್ಎಸ್ ನಾಯಕ ಹಾಗೂ ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಅವರು ಹೇಳಿದ್ದಾರೆ.
60 ವರ್ಷಗಳ ಹಿಂದೆ ಐತಿಹಾಸಿಕ ಕಾರಣಕ್ಕಾಗಿ ವಿಭಜನೆಯಾದ ಈ ಮೂರು ರಾಷ್ಟ್ರಗಳು ಮುಂದೊಂದು ದಿನ ಯಾವುದೇ ಯುದ್ಧವಿಲ್ಲದೆ, ಉತ್ತಮ ಬಾಂದವ್ಯದಿಂದಾಗಿಯೇ ಒಂದಾಗುತ್ತವೇ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘ ಇನ್ನೂ ನಂಬಿರುವುದಾಗಿ ಅಲ್ ಜಝೀರಾ ವಾಹಿನಿಗೆ ತಿಳಿಸಿದ್ದಾರೆ.
ಒಬ್ಬ ಆರ್ಎಸ್ಎಸ್ ಸದಸ್ಯನಾಗಿ ನಾನು ಇದೇ ಅಭಿಪ್ರಾಯವನ್ನು ಹೊಂದಿದ್ದೇನೆ ಎಂದ ಬಿಜೆಪಿ ನಾಯಕ, ‘ಇದರ ಅರ್ಥ ನಾವು ಆ ದೇಶಗಳ ಮೇಲೆ ಯುದ್ಧ ಮಾಡಿ, ಸ್ವಾಧೀನಪಡಿಸಿಕೊಳ್ಳುತ್ತೇವೆ ಎಂದಲ್ಲ. ಉತ್ತಮ ಸಂಬಂಧದಿಂದಾಗಿಯೇ ಒಂದಾಗುತ್ತವೆ’ ಎಂದು ಸ್ಪಷ್ಟಪಡಿಸಿದರು.
ಇದೇ ವೇಳೆ ದೇಶದಲ್ಲಿ ಅಸಹಿಷ್ಣುತೆ ವಿರೋದಿಸಿ ಹಲವು ಸಾಹಿತಿಗಳು ತಮ್ಮ ಪ್ರಶಸ್ತಿಯನ್ನು ವಪಾಸ್ ಮಾಡುತ್ತಿರುವುದರ ಬಗ್ಗೆ ಪ್ರತಿಕ್ರಿಯಿಸಿದ ಮಾಧವ್, ಸರ್ಕಾರಕ್ಕೆ ಮತ್ತು ದೇಶಕ್ಕೆ ಕೆಟ್ಟ ಹೆಸರು ತರಲು ಅವರು ಆ ರೀತಿ ಮಾಡುತ್ತಿದ್ದಾರೆ ಎಂದರು. ಅಲ್ಲದೆ ಸಾಹಿತಿಗಳು ಅನುಸರಿಸುತ್ತಿರುವ ಪ್ರತಿಭಟನಾ ರೀತಿ ಸರಿಯಿಲ್ಲ ಎಂದರು.
ಮೋದಿ ಪಾಕ್ಗೆ ಭೇಟಿ ನೀಡುವ ಮುನ್ನವೇ ಟಿವಿ ವಾಹಿನಿ ರಾಮ್ ಮಾಧವ್ ಅವರ ಹೇಳಿಕೆಯನ್ನು ಲಂಡನ್ನಲ್ಲಿ ರೆಕಾರ್ಡ್ ಮಾಡಿತ್ತು. ಆದರೆ ನಿನ್ನೆ ತಡರಾತ್ರಿ ಕಾರ್ಯಕ್ರಮ ಪ್ರಸಾರವಾಗಿತ್ತು.