ವಾರಾಣಸಿ: ಪಂಚಾಯತ್ ಚುನಾವಣಾ ದ್ವೇಷವು ವಿದ್ಯಾರ್ಥಿನಿಯೊಬ್ಬಳ ಅತ್ಯಾಚಾರ ಹಾಗೂ ಸಾವಿನಲ್ಲಿ ಕೊನೆಯಾಗಿದೆ. ಇಂತಹ ಅಮಾನುಷ ಘಟನೆ ನಡೆದಿದ್ದು ವಾರಾಣಸಿಯ ಮಿರ್ಜಾಪುರದಲ್ಲಿ.
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೂವರು ಸೇರಿ ಗೆದ್ದ ಮಹಿಳೆಯ ಮಗಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದು, ಇದರಿಂದ ನೊಂದ ಯುವತಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಇಲ್ಲಿನ ಮಿರ್ಜಾಪುರ ಜಿಲ್ಲೆಯಲ್ಲಿ ಬ್ಲಾಕ್ ಡೆವಲಪ್ಮೆಂಟ್ ಕೌನ್ಸಿಲ್ (ಬಿಡಿಸಿ)ನ ಮಹಿಳಾ ಅಭ್ಯರ್ಥಿಯೊಬ್ಬರು ಚುನಾವಣೆಯಲ್ಲಿ ಗೆಲವು ಸಾಧಿಸಿದ್ದರು.
ಇದು ಆಕೆಯ ಪ್ರತಿಸ್ಪರ್ಧಿಗಳನ್ನು ಕೆರಳಿಸಿತ್ತು. ಈ ಹಿನ್ನೆಲೆಯಲ್ಲಿ ಮೂವರು ಬುಧವಾರ ರಾತ್ರಿ ಆಕೆಯ ಮನೆಗೆ ನುಗ್ಗಿ ಮಗಳನ್ನು ಅಪಹರಿಸಿದ್ದರು. ನಂತರ, ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಅಲ್ಲಿಂದ ನೇರವಾಗಿ ಮನೆಗೆ ಬಂದ ಯುವತಿ(11ನೇ ತರಗತಿ ವಿದ್ಯಾರ್ಥಿನಿ) ಮನೆಯವರಿಗೆ ವಿಷಯ ತಿಳಿಸಿದ್ದಳು.
ಮಾರನೇ ದಿನವೇ ಆಕೆಯ ಕುಟುಂಬ ಸದಸ್ಯರು ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಪೊಲೀಸರು ಎಫ್ ಐಆರ್ ದಾಖಲಿಸಲು ನಿರಾಕರಿಸಿದ್ದಲ್ಲದೇ, ಬಾಯಿಮಾತಿನಲ್ಲೇ ಸರಿಪಡಿಸಿಕೊಳ್ಳಿ ಎಂದು ಹೇಳಿ ವಾಪಸ್ ಕಳುಹಿಸಿದ್ದರು. ಪೊಲೀಸರ ವರ್ತನೆಯಿಂದ ನೊಂದ ವಿದ್ಯಾರ್ಥಿನಿ ಮನೆಗೆ ಬಂದು ಆತ್ಮಹತ್ಯೆಗೆ ಶರಣಾಗಿದ್ದಾಳೆ.