ರಾಷ್ಟ್ರೀಯ

ಆಪ್ ನಾಯಕನ ಮರ್ಮಾಂಗ ಕತ್ತರಿಸಿ ಬರ್ಬರ ಹತ್ಯೆ

Pinterest LinkedIn Tumblr

Dhirendra Ishwar

ನವದೆಹಲಿ: ದೆಹಲಿಯ ಬೇಗಂಪುರದಲ್ಲಿ ಆಮ್ ಆದ್ಮಿ ಪಕ್ಷದ ನಾಯಕನೊಬ್ಬನನ್ನು ಬರ್ಬರ ಹತ್ಯೆ ಮಾಡಿರುವ ಬಗ್ಗೆ ವರದಿಯಾಗಿದೆ. ಧೀರೇಂದ್ರ ಈಶ್ವರ್ ಎಂಬ ಆಪ್ ನಾಯಕನ ಶವ ಸೋಮವಾರ ಮನೆ ಬಳಿಯ ಕೆಸರು ಪ್ರದೇಶವೊಂದರಲ್ಲಿ ಪತ್ತೆಯಾಗಿತ್ತು. ಕೊಲೆಗಡುಕರು ಧೀರೇಂದ್ರ ಅವರ ಮರ್ಮಾಂಗವನ್ನು ಕತ್ತರಿಸಿ ಹತ್ಯೆಗೈದು ಶವವನ್ನು ಬಿಸಾಡಿ ಹೋಗಿದ್ದಾರೆ ಎನ್ನಲಾಗುತ್ತಿದೆ.

ಪಶ್ಚಿಮ ದೆಹಲಿಯ ನಂಗೋಲಯ್ ಪ್ರದೇಶದಲ್ಲಿ ಗೆಟ್ ಟುಗೆದರ್‌ಗೆ ಹೋಗಿ ಬರುತ್ತೇನೆ ಎಂದು ಧೀರೇಂದ್ರ ಅವರು ಭಾನುವಾರ ಮನೆಯಿಂದ ಹೊರಟಿದ್ದರು. ನಾಪತ್ತೆಯಾದ ಅವರಿಗೆ ಶೋಧ ನಡೆಸಿದಾಗ ಮನೆಯ ಹತ್ತಿರದ ಕೆಸರು ಪ್ರದೇಶವೊಂದರಲ್ಲಿ ಶವ ಪತ್ತೆಯಾಗಿದೆ. ಧೀರೇಂದ್ರ ಅವರ ಮೇಲೆ ಹಲವಾರು ಬಾರಿ ಕತ್ತಿಯಿಂದ ಚುಚ್ಚಲಾಗಿದ್ದು, ಮರ್ಮಾಂಗವನ್ನು ಕತ್ತರಿಸಲಾಗಿದೆ. ಅವರ ಮುಖದ ಮೇಲೆ ಭಾರವಾದ ವಸ್ತು ಎತ್ತಿ ಹಾಕಿ ಮುಖವನ್ನು ನಜ್ಜುಗುಜ್ಜು ಮಾಡಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಧೀರೇಂದ್ರ ಅವರನ್ನು ಮನೆಯ ಬಳಿಯೇ ಹತ್ಯೆಗೈಯ್ಯಲಾಯಿತೇ? ಅಥವಾ ಬೇರೆ ಕಡೆ ಹತ್ಯೆ ಮಾಡಿ ಮನೆಯ ಹತ್ತಿರ ಬಿಸಾಡಲಾಗಿದೆಯೇ? ಎಂಬುದರ ಬಗ್ಗೆ ಪೊಲೀಸರಿಗೆ ಸ್ಪಷ್ಟವಾದ ಮಾಹಿತಿ ಈವರೆಗೆ ಸಿಕ್ಕಿಲ್ಲ.

ಧೀರೇಂದ್ರ ಅವರು ಆಪ್ ಪಕ್ಷದ ಪೂರ್ವಾಂಚಲ ಘಟಕದ ಜಿಲ್ಲಾ ಅಧ್ಯಕ್ಷರಾಗಿದ್ದಾರೆ. ಎರಡುವಾರಗಳ ಹಿಂದೆಯಷ್ಟೇ ಇವರು ಯೋಗ ಕೇಂದ್ರವೊಂದನ್ನು ಆರಂಭಿಸಿದ್ದು, ಭೂವಿವಾದದಿಂದಾಗಿ ಆ ಕೇಂದ್ರ ಮುಚ್ಚಲ್ಪಟ್ಟಿತ್ತು.

ಭಾನುವಾರ ಸಂಜೆ 6 ಗಂಟೆಗೆ ಮನೆಯಿಂದ ಹೊರಟ ಧೀರೇಂದ್ರ ಅವರು ಏಳೂವರೆ ಗಂಟೆಗೆ ಪತ್ನಿಗೆ ಫೋನ್ ಮಾಡಿ ಸಹ ಕಾರ್ಯಕರ್ತರೊಬ್ಬರ ಜತೆ ಹೊರಗೆ ಹೋಗುತ್ತಿದ್ದೇನೆ ಎಂದು ಹೇಳಿದ್ದರು. ಸೋಮವಾರ ಬೆಳಗ್ಗೆ ಏಳು ಗಂಟೆಗೆ ಧೀರೇಂದ್ರ ಶವ ಪತ್ತೆಯಾಗಿರುವುದನ್ನು ಸ್ಥಳೀಯರು ಪೊಲೀಸರ ಗಮನಕ್ಕೆ ತಂದಿದ್ದರು.

ಧೀರೇಂದ್ರ ಅವರ ಹತ್ಯೆ ಪ್ರಕರಣ ದಾಖಲಿಸಿರುವ ಪೊಲೀಸರು ಹಲವಾರು ಮಂದಿಯನ್ನು ತನಿಖೆಗೆ ಒಳಪಡಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಡಿಸಿಪಿ ವಿಕ್ರಮ್‌ಜಿತ್ ಸಿಂಗ್ ಹೇಳಿದ್ದಾರೆ.

Write A Comment