ನವದೆಹಲಿ: ಪ್ರಧಾನ ಮಂತ್ರಿ ಮೋದಿ ಅವರ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ ಹಲವಾರು ವಚನಗಳನ್ನು ಈಡೇರಿಸಿಲ್ಲ ಎಂದು ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಹಿಂದಿನ ಸರ್ಕಾರಕ್ಕೂ ನಿಮ್ಮ ಸರ್ಕಾರಕ್ಕೂ ನನಗೆ ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದವರು ಪತ್ರದಲ್ಲಿ ತಿಳಿಸಿದ್ದಾರೆ.
ಲೋಕಪಾಲ್ ಮತ್ತು ಲೋಕಾಯುಕ್ತಗಳನ್ನು ಸೂಕ್ತವಾಗಿ ಜಾರಿಗೆ ತರುವಂತೆ ಪ್ರಧಾನಿಯವರನ್ನು ಹಜಾರೆ ಆಗ್ರಹಿಸಿದ್ದಾರೆ.
2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ನೀವು ಜನತೆಗೆ ನೀಡಿದ ಭರವಸೆಗಳನ್ನು ಮರೆತಂತಿದೆ ಎಂದಿರುವ ಹಜಾರೆ, ಭ್ರಷ್ಟಾಚಾರ ಮುಕ್ತ ಭಾರತ ಮಾಡುವೆ, ಕಪ್ಪುಹಣ ಹಿಂತಿರುಗಿ ತರುವೆ ಎಂಬ ಮಾತುಗಳೇನಾದವು ಎಂದಿದ್ದಾರೆ.
ಈ ಬಗ್ಗೆ ನಾನು ಬರೆದ ಹಲವಾರು ಪತ್ರಗಳನ್ನು ಕಸದ ಬುಟ್ಟಿಗೆ ಹಾಕಿದ್ದೀರಿ. ಈ ಪತ್ರದ ಹಣೆಬರಹವು ಅದೇ ಇರಬಹುದು. ಬರೆದ ಪ್ರತಿ ಪತ್ರಕ್ಕೂ ಪ್ರತಿಕ್ರಿಯಿಸಬೇಕು ಎಂದು ಹೇಳಲಾರೆ. ಹಾಗೆ ಮಾಡಲು ಪ್ರಧಾನಮಂತ್ರಿಯವರಿಗೆ ಆಗದಿರಬಹುದು. ಆದರೆ ದೇಶಕ್ಕಾಗಿ ಪ್ರಾಣ ಮುಡಿಪಿಟ್ಟ ಸಾಮಾಜಿಕ ಕಾರ್ಯಕರ್ತರೊಬ್ಬರು ಪತ್ರ ಬರೆದರೆ ಅದಕ್ಕೆ ಪ್ರತಿಕ್ರಿಯಿಸಬೇಕು ಎಂದಿದ್ದಾರೆ.