ನವದೆಹಲಿ: ಜನವರಿ 2ರಂದು ಭಯೋತ್ಪಾದಕರು ಪಂಜಾಬ್ ನ ಪಠಾಣ್ ಕೋಟ್ ವಾಯುನೆಲೆಯಲ್ಲಿ ನಡೆದಿದ್ದ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ವಾಯು ಸೇನಾ ನೆಲೆಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.
ವಾಯು ಸೇನಾ ನೆಲೆಗೆ ಭೇಟಿ ವೇಳೆ ಮೋದಿ ಉಗ್ರರ ದಾಳಿ ಕುರಿತಾಗಿ ಅಧಿಕಾರಿಗಳಿಂದ ವಿಸ್ತೃತ ಮಾಹಿತಿ ಪಡೆದಿದ್ದು, ಬಳಿಕ ಗಡಿ ಭಾಗ ಸೇರಿದಂತೆ ಹಲವೆಡೆ ವೈಮಾನಿಕ ಸಮೀಕ್ಷೆ ನಡೆಸುವ ಸಾಧ್ಯತೆಗಳಿವೆ.
ಮೋದಿ ಅವರು ಉಗ್ರರ ದಾಳಿಯಲ್ಲಿ ತೀವ್ರವಾಗಿ ಗಾಯಗೊಂಡಿರುವ ಯೋಧರನ್ನು ಭೇಟಿ ಮಾಡಿ ಸಾಂತ್ವನ ಹೇಳಲಿದ್ದಾರೆ.
ಸತತ ಮೂರು ದಿನಗಳ ತೀವ್ರ ಕಾರ್ಯಾಚರಣೆಯ ಬಳಿಕ ವಾಯುನೆಲೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಶುಕ್ರವಾರ ಘೋಷಿಸಿದ್ದರು.
ಜನವರಿ 2ರಂದು ನಡೆದ ಭಯೋತ್ಪಾದಕರು ಪಠಾಣ್ ಕೋಟ್ ವಾಯುನೆಲೆಯ ಮೇಲೆ ನಡೆಸಿದ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ನಮ್ಮ ಸೇನೆ ಬಲಿ ತೆಗೆದುಕೊಂಡಿದೆ. ಅದೇ ವೇಳೆ ಏಳು ಭದ್ರತಾ ಸಿಬ್ಬಂದಿ ಹುತಾತ್ಮರಾದರು. ಜನವರಿ 5ರಂದು ಪಠಾಣ್ಕೋಟ್ ವಾಯುನೆಲೆಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.