ರಾಷ್ಟ್ರೀಯ

ರಾಮ ಮಂದಿರ ವಿಚಾರ ಸಂಕಿರಣ ವಿರೋಧಿಸಿ ವಿದ್ಯಾರ್ಥಿ ಸಂಘಟನೆಗಳ ಪ್ರತಿಭಟನೆ

Pinterest LinkedIn Tumblr

protestನವದೆಹಲಿ: ದೆಹಲಿ ವಿಶ್ವ ವಿದ್ಯಾಲಯದಲ್ಲಿ ನಡೆಯುತ್ತಿರುವ ರಾಮ ಜನ್ಮ ಭೂಮಿ ವಿಷಯ ಕುರಿತ ವಿಚಾರ ಸಂಕಿರಣಕ್ಕೆ ಎನ್ಎಸ್ ಯುಐ, ಎಐಎಸ್ಎ ಮತ್ತು ಕೆವೈಎಸ್ ವಿದ್ಯಾರ್ಥಿ ಸಂಘಟನೆಗಳು ಶನಿವಾರ ವಿರೋಧ ವ್ಯಕ್ತಪಡಿಸುತ್ತಿವೆ.

ರಾಮ ಜನ್ಮ ಭೂಮಿ ವಿಷಯ ಕುರಿತ ವಿಚಾರ ಸಂಕಿರಣ ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದು, ವಿಷಯ ಕುರಿತಂತೆ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿಯವರು ಭಾಷಣ ಮಾಡುತ್ತಿದ್ದರು. ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ವಿದ್ಯಾರ್ಥಿ ಸಂಘಟನೆಗಳು ವಿಶ್ವ ವಿದ್ಯಾಲಯದ ಆವರಣದಲ್ಲಿ ಪ್ರತಿಭಟನೆ ನಡೆಸುತ್ತಿವೆ ಎಂದು ತಿಳಿದುಬಂದಿದೆ.

ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ವಿದ್ಯಾರ್ಥಿಗಳು, ವಿಶ್ವ ವಿದ್ಯಾಲಯಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳನ್ನು ಮಾತ್ರ ನಡೆಸಬೇಕೆ ವಿನಃ ಇಂತಹ ವಿಚಾರ ಸಂಕಿರಣಗಳು ನಡೆಯಬಾರದು, ಈ ರೀತಿಯ ವಿಚಾರ ಸಂಕಿರಣಗಳು ವಿದ್ಯಾರ್ಥಿಗಳ ಭಾವನೆಗಳಿಗೆ ಧಕ್ಕೆಯುಂಟು ಮಾಡುತ್ತವೆ ಎಂದು ಹೇಳುತ್ತಿವೆ.

ಘಟನೆ ಕುರಿತಂತೆ ಈಗಾಗಲೇ ಪ್ರತಿಕ್ರಿಯೆ ನೀಡಿರುವ ದೆಹಲಿ ವಿಶ್ವವಿದ್ಯಾಲಯದ ಅಧಿಕಾರಿಗಳು, ವಿಚಾರ ಸಂಕಿರಣಕ್ಕೂ ನಮಗೂ ಸಂಬಂಧವಿಲ್ಲ. ವಿಚಾರ ಸಂಕಿರಣ ನಡೆಸಲು ನಾವು ಸ್ಥಳಾವಕಾಶವನ್ನು ನೀಡಿದ್ದೇವೆ ಅಷ್ಟೇ, ಹೊರಗಿನವರಿಗೂ ನಾವು ಸ್ಥಳಾವಕಾಶ ನೀಡುತ್ತೇವೆ ಎಂದು ಹೇಳಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ಕುರಿತಂತೆ ಮಾತನಾಡಿರುವ ಸುಬ್ರಹ್ಮಣ್ಯನ್ ಸ್ವಾಮಿ ಅವರು, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ, ಆದರೆ, ಇದೊಂದು ಅಸಹಿಷ್ಣುತೆಯ ನಡೆ ಎಂದು ಹೇಳಿದ್ದಾರೆ.

ಪ್ರತಿಭಟನೆ ವೇಳೆ ಬಿಜೆಪಿ ಬೆಂಬಲಿತ ವಿದ್ಯಾರ್ಥಿ ಸಂಘಟನೆಯಾದ ಎಬಿವಿಪಿ ಹಾಗೂ ಕಾಂಗ್ರೆಸ್ ಬೆಂಬಲಿತ ವಿದ್ಯಾರ್ಥಿ ಸಂಘಟನೆ ಎನ್ಎಸ್ ಯುಐವಿನ ಕಾರ್ಯಕರ್ತರು ಘರ್ಷಣೆಗೆ ಇಳಿದಿವೆ ಎಂದು ಹೇಳಲಾಗುತ್ತಿದೆ.

Write A Comment