ಪಠಾಣ್ಕೋಟ್: ಭದ್ರತಾ ಸಿಬ್ಬಂದಿ ನಿಜಕ್ಕೂ ಅತ್ಯುತ್ತಮ ಕೆಲಸ ಮಾಡಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಭದ್ರತಾ ಸಂಸ್ಥೆಗಳ ಶ್ರಮವನ್ನು ಶನಿವಾರ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.
ಇಂದು ಉಗ್ರರು ದಾಳಿ ನಡೆಸಿದ ಪಠಾಣ್ಕೋಟ್ ವಾಯುನೆಲೆಗೆ ಭೇಟಿ ನೀಡಿ, ವೈಮಾನಿಕ ಸಮೀಕ್ಷೆ ನಡೆಸಿದ ಬಳಿಕ ಟ್ವೀಟ್ ಮಾಡಿರುವ ಮೋದಿ, ಕಾರ್ಯಾಚರಣೆ ವಿಳಂಬಕ್ಕೆ ಕಾರಣವೆನೆಂದು ಈಗ ಅರಿವಾಗಿದೆ ಎಂದಿದ್ದಾರೆ. ಅಲ್ಲದೆ ಉಗ್ರರನ್ನು ಹೊಡೆದುರಿಳಿಸಿದ ಭಾರತೀಯ ಸೇನಾ ಪಡೆಗಳ ನಿರ್ಧಾರ ತೃಪ್ತಿ ತಂದಿದೆ ಎಂದು ಹೇಳಿದ್ದಾರೆ.
ಇಂದು ನಾನು ಪಠಾಣ್ಕೋಟ್ ವಾಯುನೆಲೆಗೆ ಭೇಟಿ ನೀಡಿ, ಸೇನಾಪಡೆ, ವಾಯುಪಡೆ, ಎನ್ಎಸ್ಜಿ ಹಾಗೂ ಬಿಎಸ್ಎಫ್ ಹಿರಿಯ ಅಧಿಕಾರಿಗಳಿಂದ ವಿಸ್ತೃತ ಮಾಹಿತಿ ಪಡೆದಿದ್ದೇನೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಸತತ ಮೂರು ದಿನಗಳ ತೀವ್ರ ಕಾರ್ಯಾಚರಣೆಯ ಬಳಿಕ ವಾಯುನೆಲೆ ಸಂಪೂರ್ಣ ಸುರಕ್ಷಿತವಾಗಿದೆ ಎಂದು ಭದ್ರತಾ ಪಡೆ ಅಧಿಕಾರಿಗಳು ಶುಕ್ರವಾರ ಘೋಷಿಸಿದ್ದರು.
ಜನವರಿ 2ರಂದು ನಡೆದ ಭಯೋತ್ಪಾದಕರು ಪಠಾಣ್ ಕೋಟ್ ವಾಯುನೆಲೆಯ ಮೇಲೆ ನಡೆಸಿದ ವೇಳೆ ನಡೆದ ಕಾರ್ಯಾಚರಣೆಯಲ್ಲಿ ಆರು ಮಂದಿ ಭಯೋತ್ಪಾದಕರನ್ನು ನಮ್ಮ ಸೇನೆ ಬಲಿ ತೆಗೆದುಕೊಂಡಿದೆ. ಅದೇ ವೇಳೆ ಏಳು ಭದ್ರತಾ ಸಿಬ್ಬಂದಿ ಹುತಾತ್ಮರಾದರು. ಜನವರಿ 5ರಂದು ಪಠಾಣ್ಕೋಟ್ ವಾಯುನೆಲೆಗೆ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಭೇಟಿ ನೀಡಿ ಪರಿಸ್ಥಿತಿ ಅವಲೋಕಿಸಿದ್ದರು.