ನವದೆಹಲಿ: ವಿವಾದಿತ ಆಯೋಧ್ಯ ರಾಮ ಮಂದಿರ ನಿರ್ಮಾಣಕ್ಕೆ ಯೋಗ ಗುರು ಬಾಬಾ ರಾಮ್ ದೇವ್ ಕೂಡ ಬೆಂಬಲ ವ್ಯಕ್ತಪಡಿಸಿದ್ದು, ಆಯೋಧ್ಯೆಯು ರಾಮನ ಜನ್ಮ ಭೂಮಿಯೇ ಹೊರತು ಪ್ರವಾದಿ ಮೊಹಮ್ಮದ್ ಅವರದ್ದಲ್ಲ ಎಂದು ಶನಿವಾರ ಹೇಳಿದ್ದಾರೆ.
ರಾಮ ಮಂದಿರ ಕುರಿತಂತೆ ಟ್ವಿಟರ್ ಪ್ರತಿಕ್ರಿಯೆ ನೀಡಿರುವ ಅವರು, ಶ್ರೀ ರಾಮ ನಮ್ಮ ಹೆಮ್ಮೆಯ ಪ್ರತೀಕ. ಅಯೋಧ್ಯೆ ರಾಮ ಹುಟ್ಟಿದ ಭೂಮಿಯೇ ಹೊರತು ಪ್ರವಾದಿ ಮೊಹಮ್ಮದ್ ಅವರದ್ದಲ್ಲ ಎಂದು ಪ್ರತೀ ಹಿಂದೂ ಹಾಗೂ ಮುಸ್ಲಿಮರಿಗೂ ತಿಳಿದಿರುವ ವಿಚಾರ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ರಾಮ ಮಂದಿರ ವಿಚಾರ ಕುರಿತಂತೆ ದೆಹಲಿ ವಿಶ್ವವಿದ್ಯಾಲಯದಲ್ಲಿ ವಿಚಾರ ಸಂಕಿರಣವೊಂದನ್ನು ಏರ್ಪಡಿಸಲಾಗಿತ್ತು. ವಿಚಾರ ಸಂಕಿರಣದಲ್ಲಿ ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಅವರು ಮಾತನಾಡಿದ್ದರು. ಈ ವಿಚಾರ ಸಂಕಿರಣಕ್ಕೆ ವಿರೋಧ ವ್ಯಕ್ತಪಡಿಸಿದ್ದ ವಿದ್ಯಾರ್ಥಿಗಳ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ಈ ಹಿನ್ನೆಲೆಯಲ್ಲಿ ಬಾಬಾ ರಾಮ್ ದೇವ್ ಅವರು ರಾಮ ಮಂದಿರ ನಿರ್ಮಾಣ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.