ಶ್ರೀನಗರ: ತಂದೆ ನಿಧನದ ಬಳಿಕ ಮುಖ್ಯಮಂತ್ರಿಯಾಗುವ ಒತ್ತಡಕ್ಕೆ ಸಿಲುಕಿರುವ ಮೆಹಬೂಬಾ ಮುಫ್ತಿ ಭಾನುವಾರ ಸಂಜೆ ನಡೆದ ಶಾಸಕರ ಸಭೆಯಲ್ಲಿ ತೀವ್ರ ಭಾವೋದ್ವೇಗಕ್ಕೆ ಒಳಗಾಗಿ ಈ ಬಗ್ಗೆ ಏನೂ ಮಾತನಾಡದೇ ಮೌನಕ್ಕೆ ಶರಣಾದ ಘಟನೆ ನಡೆದಿದೆ.
ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ವಿಚಾರವಾಗಿಯೇ ರ್ಚಚಿಸಲು ಪಿಡಿಪಿ ಪಕ್ಷ ಶಾಸಕರು, ಹಿರಿಯ ನಾಯಕರ ಸಭೆ ಕರೆದಿತ್ತು. 56 ವರ್ಷ ವಯಸ್ಸಿನ ಮೆಹಬೂಬಾ ಕೂಡ ಪಾಲ್ಗೊಂಡಿದ್ದರು. ಕಳೆದ ಚುನಾವಣೆಯಲ್ಲಿ ತಂದೆ ಜತೆ ನಿಂತು ಪಕ್ಷವನ್ನು ಅಧಿಕಾರಕ್ಕೇರಿಸುವಲ್ಲಿ ಮೆಹಬೂಬಾ ಸಾಕಷ್ಟು ಶ್ರಮಿಸಿದ್ದರು.
ಮೂಲಗಳ ಪ್ರಕಾರ ಮೆಹಬೂಬಾ ಸಭೆಯಲ್ಲಿ ಮುಂದಿನ ಮುಖ್ಯಮಂತ್ರಿ ಆಗುವ ವಿಚಾರವನ್ನಾಗಲಿ, ಪ್ರಮಾಣ ವಚನ ಸ್ವೀಕರಿಸುವ ವಿಚಾರವನ್ನಾಗಲಿ ಪ್ರಸ್ತಾಪಿಸದೆ ತೀವ್ರ ಭಾವೋದ್ವೇಗಕ್ಕೊಳಗಾಗಿ ಕಣ್ಣೀರಿಟ್ಟಿದ್ದಾರೆ.
ಈಗಾಗಲೇ ಬಿಜೆಪಿ ಜತೆಗೂಡಿ ಸರ್ಕಾರ ಮಾಡಿರುವ ಪಿಡಿಪಿ ಈಗ ಒಂದಿಷ್ಟು ಷರತ್ತುಗಳನ್ನು ಮುಂದಿಟ್ಟಿದೆ. ಹಾಗೇ ಬಿಜೆಪಿ ಕೂಡ ಕೆಲ ಷರತ್ತುಗಳನ್ನು ಹಾಕಿದ್ದು, ಮೆಹಬೂಬಾ ಸಿಎಂ ಆಗಿ ಅಧಿಕಾರಕ್ಕೇರುವುದು ಕೂಡ ಅನುಮಾನವಾಗಿದೆ. ಈ ನಡುವೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಮುಫ್ತಿ ನಿವಾಸಕ್ಕೆ ಭೇಟಿ ನೀಡಿ ಮೆಹಬೂಬಾ ಜತೆ ಮಾತುಕತೆ ನಡೆಸಿದ್ದಾರೆ. ಕಳೆದ ರಾತ್ರಿ ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ ಅವರು ಮಾತುಕತೆ ನಡೆಸಿದ್ದಾರೆ.