ನವದೆಹಲಿ: ಉಗ್ರರಿಂದ ಅಪಹರಣಕ್ಕೊಳಗಾಗಿದ್ದ ಪಂಜಾಬ್ ಎಸ್ಪಿ ಸಲ್ವಿಂದರ್ ಸಿಂಗ್ ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಎರಡನೇ ದಿನವೂ ಸಹ ವಿಚಾರಣೆಗೆ ಒಳಪಡಿಸುತ್ತಿದೆ. ಸಲ್ವಿಂದರ್ ಸಿಂಗ್ ಮಂಗಳವಾರ ಎನ್ಐಎ ಕೇಂದ್ರ ಕಚೇರಿಯಲ್ಲಿ ವಿಚಾರಣೆಗಾಗಿ ಹಾಜರಾಗಿದ್ದಾರೆ.
ಸೋಮವಾರ ಎನ್ಐಎ ಸಲ್ವಿಂದರ್ ಸಿಂಗ್ರನ್ನು ವಿಚಾರಣೆಗೆ ಒಳಪಡಿಸಿದ್ದು, ದಾಳಿಯ ಹಿಂದಿನ ದಿನ ನಡೆದ ಘಟನೆಗಳ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದೆ. ಸಲ್ವಿಂದರ್ ಸಿಂಗ್ರನ್ನು ಸುಳ್ಳು ಪತ್ತೆ ಪರೀಕ್ಷೆಗೂ ಒಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅಪಹರಣದ ದಿನ ಸಲ್ವಿಂದರ್ ಜತೆಯಲ್ಲಿದ್ದ ಅವರ ಸ್ನೇಹಿತ ರಾಜೇಶ್ ಮತ್ತು ಅವರ ಅಡುಗೆಯವನನ್ನೂ ಎನ್ಐಎ ಅಧಿಕಾರಿಗಳು ವಿಚಾರಣೆಗೊಳಪಡಿಸಿದ್ದಾರೆ.
ಉಗ್ರರ ದಾಳಿ ಸಂಬಂಧ ತನಿಖೆಯನ್ನು ಚುರುಕುಗೊಳಿಸಿರುವ ಪಠಾಣ್ಕೋಟ್ ವಾಯುನೆಲೆ ಹೊರಭಾಗದಲ್ಲಿ ಒಂದು ಮೊಬೈಲ್ ಪೋನ್, ಎ.ಕೆ. 47 ಬಂದೂಕಿನ ಮ್ಯಾಗಜೀನ್ ಮತ್ತು ಬೈನಾಕುಲರ್ನ್ನು ಸೋಮವಾರ ವಶಪಡಿಸಿಕೊಂಡಿದೆ. 10 ಜನರ ವಿಶೇಷ ತಂಡ ಪಠಾಣ್ಕೋಟ್ ವಾಯುನೆಲೆ ಸುತ್ತಮುತ್ತ ಸುಳಿವುಗಳಿಗಾಗಿ ಹುಡುಕಾಟ ನಡೆಸುತ್ತಿದೆ.