ಲಂಡನ್: ಕಳೆದ ಕೆಲ ತಿಂಗಳುಗಳಿಂದ ಭಾರಿ ಸದ್ದು ಮಾಡುತ್ತಿರುವ ನೇತಾಜಿ ಸುಭಾಷ್ ಚಂದ್ರಬೋಸ್ ನಿಗೂಢ ಕಣ್ಮರೆ ಪ್ರಕರಣಕ್ಕೆ ಮತ್ತೊಂದು ಹೊಸ ತಿರುವು ಸಿಕ್ಕಿದೆ.
1945ರ ಅಗಸ್ಟ್ 18ರಂದು ನಡೆದ ವಿಮಾನ ದುರಂತದ ಬಳಿಕವೂ ನೇತಾಜಿ ಕೆಲ ದಿನಗಳ ಕಾಲ ಬದುಕಿದ್ದರೆಂಬ ಮಾಹಿತಿಯೊಂದು ಬ್ರಿಟನ್ ವೆಬ್ಸೈಟ್ನಲ್ಲಿ ಪ್ರಕಟಗೊಂಡಿದ್ದು, ತೀವ್ರ ಚರ್ಚೆಗೆ ಗ್ರಾಸವಾಗಿದೆ.
ವೆಬ್ಸೈಟ್ನಲ್ಲಿ ಮಾಹಿತಿ ಪ್ರಕಟವಾಗಿರುವ ಪ್ರಕಾರ ತೈವಾನ್ ವಿಮಾನ ದುರಂತದ ಬಳಿಕ ನೇತಾಜಿ ಬದುಕಿದ್ದು, ಅವರು
ಗಂಭೀರವಾಗಿ ಗಾಯಗೊಂಡಿದ್ದರು. ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲು ಮಾಡಿದಾಗ ಅವರು ಅಲ್ಲಿ ಕೊನೆಯುಸಿರೆಳೆದಿದ್ದಾರೆ ಎಂದು ಪ್ರಕಟವಾಗಿದೆ.
ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ವೇಳೆ ಇಲ್ಲಿಂದ ತಾಯ್ನಾಡು ಭಾರತಕ್ಕೆ ವಾಪಸ್ ಹೋದ ಮೇಲೆ ನನ್ನ ಕೊನೆಯುಸಿರಿರುವ ತನಕ ಸ್ವಾತಂತ್ರ್ಯಕ್ಕಾಗಿ ಹೋರಾಡುವೆ ಎಂದು ಅವರು ಹೇಳಿದ್ದರು. ಭಾರತ ಖಂಡಿತವಾಗಿ ಸ್ವತಂತ್ರವಾಗುತ್ತದೆ ಎಂದು ತಿಳಿಸಿ ಕೊನೆಯುಸಿರೆಳೆದಿದ್ದರು ಎಂದು ವೆಬ್ಸೈಟ್ನಲ್ಲಿ ಪ್ರಕಟವಾಗಿದೆ.
ವಿಮಾನ ದುರಂತದಿಂದ ಗಂಭೀರವಾಗಿ ಗಾಯಗೊಂಡಿದ್ದ ನೇತಾಜಿಯವರಿಗೆ ಸ್ಥಳೀಯ ಮಿಲಿಟರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅವರಿಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು ಎನ್ನಲಾಗಿದ್ದು, ಆದರೆ ಅವರ ಪಾರ್ಥಿವ ಶರೀರ ಎಲ್ಲಿ ಹೋಯ್ತು, ಅದರ ಅಂತ್ಯಕ್ರಿಯೆ ನಡೆಯಿತೆ ಎಂಬಿತ್ಯಾದಿ ಬಗ್ಗೆ ಯಾವುದೇ ಮಾಹಿತಿ ಪ್ರಕಟಗೊಂಡಿಲ್ಲ.